1,000 ಅಲೋಪತಿ ವೈದ್ಯರನ್ನು ಆಯುರ್ವೇದಕ್ಕೆ 'ಪರಿವರ್ತಿಸುವೆ’ ಎಂದ ರಾಮ್ ದೇವ್
ಹರಿದ್ವಾರ: ಕೋವಿಡ್ -19 ಚಿಕಿತ್ಸೆಯಲ್ಲಿ ಅಲೋಪತಿ ಔಷಧಿಗಳ ವ್ಯತಿರಿಕ್ತ ಪಾತ್ರದ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯದಿಂದ ವಿವಾದಕ್ಕೆ ಸಿಲುಕಿರುವ ಯೋಗ ಗುರು ರಾಮ್ ದೇವ್ ಅವರು ಹರಿದ್ವಾರದ ತಮ್ಮ ಯೋಗ ಗ್ರಾಮ ಕೇಂದ್ರದಲ್ಲಿ ನಡೆದ ಯೋಗ ಶಿಬಿರದಲ್ಲಿ ಮಾತನಾಡುತ್ತಾ 1,000 ಅಲೋಪಥಿಕ್ ವೈದ್ಯರನ್ನು ಒಂದು ವರ್ಷದ ಅವಧಿಯಲ್ಲಿ ಆಯುರ್ವೇದಕ್ಕೆ ಪರಿವರ್ತಿಸುವ ಗುರಿಯನ್ನು ತಾನು ಹೊಂದಿದ್ದಾಗಿ ಹೇಳಿದರು.
ಯೋಗ ಶಿಬಿರದಲ್ಲಿ ಮಾತನಾಡಿದ ರಾಮ್ ದೇವ್, "ಎಂಬಿಬಿಎಸ್ ಹಾಗೂ ಎಂಡಿ ಪದವಿಗಳನ್ನು ಹೊಂದಿರುವ ಹಲವಾರು ಅಲೋಪಥಿಗಳು ಸಹ ಯೋಗ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ . ಈ ವೈದ್ಯರು ಅಲೋಪತಿ ಔಷಧಿಗಳ ಅಡ್ಡಪರಿಣಾಮಗಳನ್ನು ಎದುರಿಸಿದ್ದಾರೆ. ಈಗ ಯೋಗ ಹಾಗೂ ಆಯುರ್ವೇದದತ್ತ ಮುಖ ಮಾಡಿದ್ದಾರೆ. ಅವರಲ್ಲಿ ಕೆಲವರು ತಮ್ಮ ಪ್ರಾಕ್ಟೀಸ್ ನಿಂದ ಸ್ವಯಂಪ್ರೇರಿತವಾಗಿ ನಿವೃತ್ತಿ ಪಡೆದಿದ್ದಾರೆ. ನಮ್ಮ ಮಾರ್ಗವನ್ನು ಅನುಸರಿಸಲು ನಿರ್ಧರಿಸಿದ್ದಾರೆ. ವಾಸ್ತವವಾಗಿ, ಮುಂದಿನ ಒಂದು ವರ್ಷದಲ್ಲಿ, 1, 000 ಕ್ಕೂ ಹೆಚ್ಚು ಅಲೋಪತಿ ವೈದ್ಯರನ್ನು ಪ್ರಕೃತಿ ಚಿಕಿತ್ಸೆಗೆ ಪರಿವರ್ತಿಸುವುದು ನಮ್ಮ ಗುರಿಯಾಗಿದೆ ಎಂದು ನಾನು ನಿರ್ಧರಿಸಿದ್ದೇನೆ”ಎಂದು ಅವರು ಹೇಳಿದರು.