ತಪ್ಪಾಗಿ ಗೋಹತ್ಯೆ ಕಾಯ್ದೆ ಜಾರಿಗೊಳಿಸಿದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಅಲಹಾಬಾದ್ ಹೈಕೋರ್ಟ್
ಲಕ್ನೋ, ಜೂ. 13: ಅರ್ಜಿದಾರನ ವಿರುದ್ಧ ಉತ್ತರಪ್ರದೇಶ ಗೋ ಹತ್ಯೆ ತಡೆ ಕಾಯ್ದೆಯನ್ನು ಫೆಬ್ರವರಿಯಲ್ಲಿ ತಪ್ಪಾಗಿ ಜಾರಿಗೊಳಿಸಲಾಗಿದೆ ಎಂಬುದನ್ನು ಪರಿಗಣಿಸಿದ ಬಳಿಕ ಅಲಹಾಬಾದ್ ಉಚ್ಚ ನ್ಯಾಯಾಲಯ ಸೀತಾಪುರ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. ಉತ್ತರಪ್ರದೇಶ ಗೋ ಹತ್ಯೆ ತಡೆ ಕಾಯ್ದೆ ಅಡಿಯಲ್ಲಿ ದಾಖಲಿಸಲಾದ ಪ್ರಕರಣದ ಕುರಿತು ಎರಡು ವಾರಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಹೈಕೋರ್ಟ್ ಸೂಚಿಸಿದೆ.
ಗೋಹತ್ಯೆ ತಡೆ ಕಾಯ್ದೆ ಅಡಿಯಲ್ಲಿ ಫೆಬ್ರವರಿ 25ರಂದು ಇಬ್ರಾಹಿಂ, ಅನೀಶ್ ಹಾಗೂ ಶಹ್ಜಾದ್ ರೊಂದಿಗೆ ತನ್ನ ವಿರುದ್ಧ ದಾಖಲಿಸಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿ ಸೂರಜ್ (22) ಸಲ್ಲಿಸಿದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅಬ್ದುಲ್ ಮೊಯಿನ್ ಅವರು ನಡೆಸಿದರು. ಮೂರು ಕರುಗಳನ್ನು ಕೊಂದ ಬಗೆಗಿನ ಆರೋಪಿಗಳ ನಡುವಿನ ಸಂಭಾಷಣೆಯನ್ನು ಪೊಲೀಸರ ತಂಡ ಕೇಳಿಸಿಕೊಂಡಿದೆ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ. ಇಂತಹ ಕ್ಷುಲ್ಲಕ ಆರೋಪದ ಆಧಾರದಲ್ಲಿ ತನ್ನ ಕಕ್ಷಿದಾರರನ್ನು ಫೆಬ್ರವರಿ 25ರಿಂದ ಕಾರಾಗೃಹದಲ್ಲಿ ಇರಿಸಲಾಗಿದೆ ಎಂದು ಸೂರಜ್ ಪರ ನ್ಯಾಯವಾದಿ ದಿಲೀಪ್ ಕುಮಾರ್ ವಾದಿಸಿದ್ದರು.