ಭಾರತದ ಮಾಹಿತಿ ತಂತ್ರಜ್ಞಾನ ನಿಯಮಗಳು ಜಾಗತಿಕ ಹಕ್ಕು ನಿಯಮಗಳಿಗೆ ಅನುಗುಣವಾಗಿಲ್ಲ: ವಿಶ್ವಸಂಸ್ಥೆ ವರದಿ
ಹೊಸದಿಲ್ಲಿ,ಜೂ.20: ದೇಶದಲ್ಲಿ ಜಾರಿಗೆ ಬಂದಿರುವ ನೂತನ ಮಾಹಿತಿ ತಂತ್ರಜ್ಞಾನ (ಐಟಿ)ನಿಯಮಗಳು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ವಿಶ್ವಸಂಸ್ಥೆಯ ವಿಶೇಷ ವರದಿಗಾರರು ಭಾರತ ಸರಕಾರಕ್ಕೆ ತಿಳಿಸಿದ್ದಾರೆ. ಬಹುಪಕ್ಷೀಯ ಪ್ರಜಾಪ್ರಭುತ್ವ, ಪ್ರಜಾಸತ್ತಾತ್ಮಕ ಸಿದ್ಧಾಂತಗಳು ಮತ್ತು ಮಾನವ ಹಕ್ಕುಗಳ ಪರ ಯಾವುದೇ ಧ್ವನಿಯನ್ನಡಗಿಸಲು ಸಮರ್ಥನೆಯಾಗಿ ಅಭಿವ್ಯಕ್ತಿ ಸ್ವಾತಂತ್ರವನ್ನು ನಿರ್ಬಂಧಿಸುವಂತಿಲ್ಲ ಎಂದು ಅವರು ತಮ್ಮ ವರದಿಯಲ್ಲಿ ನೆನಪಿಸಿದ್ದಾರೆ.
ಅಂತಿಮ ಪಠ್ಯವು ಭಾರತದ ಅಂತರರಾಷ್ಟ್ರೀಯ ಕಾನೂನು ಬಾಧ್ಯತೆಗಳಿಗೆ ಅನುಗುಣವಾಗಿದೆ ಎನ್ನುವುದನ್ನು ಖಚಿತಪಡಿಸಲು ಐಟಿ ನಿಯಮಗಳ ವಿಷಯದಲ್ಲಿ ಸಂಬಂಧಿಸಿದ ಪಾಲುದಾರರೊಡನೆ ಸಮಾಲೋಚನೆಗಳು ಅಗತ್ಯವಾಗಿವೆ ಎಂದೂ ವರದಿಯು ತಿಳಿಸಿದೆ.
ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಉತ್ತೇಜನ ಮತ್ತು ರಕ್ಷಣೆ ಹಾಗೂ ಶಾಂತಿಯುತವಾಗಿ ಸಭೆ ಸೇರುವಿಕೆಯ ಸ್ವಾತಂತ್ರದ ಹಕ್ಕುಗಳು ಮತ್ತು ಖಾಸಗಿತನ ಹಕ್ಕುಗಳ ಕುರಿತ ವಿಶೇಷ ವರದಿಗಾರರ ನಿರೂಪಗಳಲ್ಲಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗಿದೆ.
ತಂತ್ರಜ್ಞಾನ ಆವಿಷ್ಕಾರದಲ್ಲಿ ಜಾಗತಿಕ ನಾಯಕನಾಗಿ ಭಾರತವು ಡಿಜಿಟಲ್ ಹಕ್ಕುಗಳ ರಕ್ಷಣೆಯ ಪ್ರಯತ್ನಗಳಲ್ಲಿ ತನ್ನನ್ನು ಮುಂಚೂಣಿಯಲ್ಲಿರಿಸಬಹುದಾದ ಶಾಸನವನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಅದು ನಿಯಮಗಳ ವ್ಯಾಪ್ತಿಯನ್ನು ಸಾಕಷ್ಟು ಹಿಗ್ಗಿಸಿರುವುದು ಈ ಆಶಯಕ್ಕೆ ವಿರುದ್ಧವಾಗುವ ಸಾಧ್ಯತೆಯಿದೆ ಎಂದು ವರದಿಯು ಹೇಳಿದೆ.
ಆದ್ದರಿಂದ ಐಟಿ ನಿಯಮಗಳ ವಿವರವಾದ ಪುನರ್ಪರಿಶೀಲನೆಗಾಗಿ ಮತ್ತು ಮಾನವ ಹಕ್ಕುಗಳು,ಅಭಿವ್ಯಕ್ತಿ ಸ್ವಾತಂತ್ರ,ಖಾಸಗಿತನ ಹಕ್ಕುಗಳು ಹಾಗೂ ಡಿಜಿಟಲ್ ಹಕ್ಕುಗಳ ಕುರಿತು ಕಾರ್ಯ ನಿರ್ವಹಿಸುತ್ತಿರುವ ನಾಗರಿಕ ಸಮಾಜದ ಗುಂಪುಗಳು ಸೇರಿದಂತೆ ಎಲ್ಲ ಸಂಬಂಧಿತ ಪಾಲುದಾರರೊಡನೆ ಸಮಾಲೋಚನೆಗಳನ್ನು ನಡೆಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಾವು ಸರಕಾರವನ್ನು ಉತೇಜಿಸುತ್ತೇವೆ ಎಂದು ವರದಿಯು ತಿಳಿಸಿದೆ.
ವಾಕ್ ಸ್ವಾತಂತ್ರದ ಬಗ್ಗೆ ಅಮೆರಿಕದ ಕಂಪನಿಗಳ ಭಾಷಣಗಳ ಅಗತ್ಯವಿಲ್ಲ: ಪ್ರಸಾದ್
ಸರ್ವೋಚ್ಚ ನ್ಯಾಯಾಲಯದ ನಿರ್ದೇಶದ ಬಳಿಕ ಕೇಂದ್ರ ಸರಕಾರವು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ ಮತ್ತು ಸಾಮಾಜಿಕ ಮಾಧ್ಯಮಗಳ ದುರುಪಯೋಗವನ್ನು ತಡೆಯಲು ಇವು ಅಗತ್ಯವಾಗಿವೆ ಎಂದು ಕೇಂದ್ರ ಕಾನೂನು ಮತ್ತು ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಶನಿವಾರ ಆನ್ಲೈನ್ ಉಪನ್ಯಾಸ ನೀಡಿದ ಅವರು,ಅಮೆರಿಕದ ಲಾಭದಾಯಕ ಕಂಪನಿಗಳಿಂದ ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ಭಾರತಕ್ಕೆ ಭಾಷಣಗಳ ಅಗತ್ಯವಿಲ್ಲ ಮತ್ತು ಭಾರತದಲ್ಲಿ ಕಾರ್ಯ ನಿರ್ವಹಿಸಬೇಕಿದ್ದರೆ ಭಾರತೀಯ ಕಾನೂನಿಗೆ ವಿಧೇಯವಾಗಿರಬೇಕು ಎಂದು ಟ್ವಿಟರ್ ಗೆ ಎಚ್ಚರಿಕೆ ನೀಡಿದರು.