ಲಕ್ಷದ್ವೀಪ: ತೆಂಗಿನ ಗರಿಗಳು, ತ್ಯಾಜ್ಯಗಳು ಸ್ಥಳದಲ್ಲಿದ್ದರೆ ಭಾರೀ ದಂಡ ವಿಧಿಸುವ ಆದೇಶ ಹೊರಡಿಸಿದ ಪ್ರಫುಲ್ ಪಟೇಲ್
ದ್ವೀಪವಾಸಿಗಳಿಂದ ಇಂದು ಪ್ರತಿಭಟನೆ
Photo: Newindianexpress
ಕೊಚ್ಚಿ: ಮನೆಯ ಆವರಣದಲ್ಲಿ ಅಥವಾ ಓರ್ವ ವ್ಯಕ್ತಿಗೆ ಸೇರಿದ ಜಾಗದಲ್ಲಿ ತೆಂಗಿನ ಗರಿಗಳು ಅಥವಾ ತ್ಯಾಜ್ಯಗಳಿದ್ದ ದಂಡ ವಿಧಿಸುವಂತೆ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ನಿಯಮ ವಿಧಿಸಿದ್ದನ್ನು ವಿರೋಧಿಸಿ ಲಕ್ಷದ್ವೀಪ ನಿವಾಸಿಗಳು ಪ್ರತಿಭಟನೆ ಆಯೋಜಿಸಿದ್ದಾರೆಂದು Newindianexpress.com ವರದಿ ಮಾಡಿದೆ.
ತೆಂಗಿನ ಗರಿಗಳ ರಾಶಿಯ ಮೇಲೆ ಸೋಮವಾರ ಬೆಳಗ್ಗೆ 9 ಗಂಟೆಯಿಂದ ಪ್ಲೇಕಾರ್ಡ್ ಗಳನ್ನು ಹಿಡಿದುಕೊಂಡು ಪ್ರತಿಭಟನಕಾರರು ಧರಣಿ ಪ್ರಾರಂಭಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಮಾತನಾಡಿದ ಲಕ್ಷದ್ವೀಪ ನಿವಾಸಿ ಹಾಗೂ ಸ್ಥಳೀಯ ಮುಖಂಡ ಎಐ ಮುತ್ತುಕೋಯ, "ಒಂದರ್ಥದಲ್ಲಿ ಇದೊಂದು ವಿಚಿತ್ರ ಕ್ರಮವಾಗಿದೆ. ತೆಂಗಿನ ಗರಿಗಳು ಅಥವಾ ಇತರ ತ್ಯಾಜ್ಯಗಳು ನಮ್ಮ ಸ್ಥಳಗಳಲ್ಲಿ ಬಿದ್ದಿದ್ದರೆ ದಂಡ ವಿಧಿಸುತ್ತಿದ್ದಾರೆ. ಲಕ್ಷದ್ವೀಪವು ತೆಂಗಿನ ಮರಗಳ ಭೂಮಿ ಎನ್ನುವುದು ಎಲ್ಲರಿಗೂ ತಿಳಿದಿದೆ. ತ್ಯಾಜ್ಯಗಳನ್ನು ಸುಡಲೂ ನಮಗೆ ಅವಕಾಶ ನೀಡುತ್ತಿಲ್ಲ. ತ್ಯಾಜ್ಯಗಳನ್ನು ಸುಡುವುದಕ್ಕೆಂದು ಪ್ರತ್ಯೇಕ ಸ್ಥಳ ಗೊತ್ತುಪಡಿಸಲಾಗಿದೆ" ಎಂದು ಅವರು ಹೇಳಿದ್ದಾರೆ.
"ತೆಂಗಿನ ಗರಿಗಳು ಅಥವಾ ಇತರ ತ್ಯಾಜ್ಯಗಳು ನಮ್ಮ ಸ್ಥಳದಲ್ಲಿ ಬಿದ್ದಿದ್ದರೆ ಅವರು 1000ದಿಂದ 2000ರೂ. ವರೆಗೆ ದಂಡ ವಿಧಿಸುತ್ತಾರೆ. ಈ ವಿಚಿತ್ರ ನಿಯಮವನ್ನು ವಿರೋಧಿಸಿ ಮುಷ್ಕರ ನಡೆಸಲಾಗುತ್ತಿದೆ. ಘನತ್ಯಾಜ್ಯಗಳ ಸಂಸ್ಕರಣೆಗೆ ನಮ್ಮಲ್ಲಿ ಪರಿಹಾರವಿದೆ, ಇದೂ ನಮ್ಮ ಬೇಡಿಕೆಯಲ್ಲಿ ಒಳಗೊಂಡಿದೆ. ದಂಡವನ್ನು ನಿಲ್ಲಿಸಬೇಕೆಂದು ನಾವು ಬಯಸುತ್ತೇವೆ" ಎಂದು ಅವರು ಹೇಳಿಕೆ ನೀಡಿದ್ದಾರೆ.