ವಲಸೆ ಕಾರ್ಮಿಕರಿಗಾಗಿ ʼಒನ್ ನೇಶನ್, ಒನ್ ರೇಶನ್ʼ ಯೋಜನೆ ಜಾರಿಗೆ ತರಬೇಕು: ಸುಪ್ರೀಂಕೋರ್ಟ್
ಹೊಸದಿಲ್ಲಿ, ಜೂ.29: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ, ವಲಸೆ ಕಾರ್ಮಿಕರು ದೇಶದ ಯಾವುದೇ ಭಾಗದಲ್ಲಿ ಪಡಿತರ ಪಡೆಯಲು ಸಾಧ್ಯವಾಗುವ ಒಂದು ದೇಶ, ಒಂದು ಪಡಿತರ ಯೋಜನೆಯನ್ನು ಜುಲೈ ೩೧ರೊಳಗೆ ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್ ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಅಸಂಘಟಿತ ವಲಯದ ಕಾರ್ಮಿಕರ ನೋಂದಣಿಗೆ ಪೂರಕವಾಗುವ ರಾಷ್ಟ್ರೀಯ ಪೋರ್ಟಲ್ ಅನ್ನು ಜುಲೈ 31ರೊಳಗೆ ಸ್ಥಾಪಿಸುವಂತೆ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂಆರ್ ಶಾ ಅವರಿದ್ದ ನ್ಯಾಯಪೀಠ ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ಪಡಿತರ ಯೋಜನೆಗೆ ನೋಂದಾಯಿಸಿಕೊಳ್ಳಲು ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಲವು ಯೋಜನೆಗಳ ಪ್ರಯೋಜನ ಪಡೆಯಲು ಅಸಂಘಟಿತ ವಲಯದ ಕಾರ್ಮಿಕರು ಸುದೀರ್ಘ ಅವಧಿಯಿಂದ ಕಾಯುತ್ತಿರುವಾಗ, ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ನಿರ್ಲಕ್ಷ್ಯ, ಅಸಡ್ಡೆ ಮತ್ತು ನಿರಾಸಕ್ತ ವರ್ತನೆ ಅಕ್ಷಮ್ಯವಾಗಿದೆ. ಈ ಉಪಕ್ರಮವನ್ನು ಪೂರ್ಣಗೊಳಿಸುವಂತೆ 2018ರಲ್ಲೇ ಸೂಚಿಸಿದ್ದರೂ ಕೇಂದ್ರದ ಇಲಾಖೆ ಇದನ್ನು ಪೂರ್ಣಗೊಳಿಸಿಲ್ಲ. ಇದನ್ನು ಗಮನಿಸಿದರೆ ವಲಸೆ ಕಾರ್ಮಿಕರ ಪರಿಸ್ಥಿತಿಯ ಬಗ್ಗೆ ಇಲಾಖೆಗೆ ಅರಿವಿಲ್ಲ ಎಂದು ಭಾಸವಾಗುತ್ತದೆ. ಸರಕಾರದ ಈ ವರ್ತನೆ ಖಂಡನೀಯ ಎಂದು ಸುಪ್ರೀಂಕೋರ್ಟ್ ಎಚ್ಚರಿಸಿದೆ.
ವಲಸೆ ಕಾರ್ಮಿಕರಿಗೆ ರೇಷನ್(ಧಾಲ್, ಹಿಟ್ಟು, ಅಕ್ಕಿ, ಬೇಳೆಕಾಳು, ಸಕ್ಕರೆ ಮತ್ತು ಹಾಲಿನ ಪುಡಿ) ಒದಗಿಸಿ ಸಮುದಾಯ ಅಡುಗೆ ಮನೆಯ ವ್ಯವಸ್ಥೆ ಮಾಡಿದರೆ ಯಾರು ಕೂಡಾ ಹಸಿವಿನಿಂದ ಬಳಲುವುದಿಲ್ಲ ಎಂದು ನ್ಯಾಯಪೀಠ ಸಲಹೆ ಮಾಡಿದೆ.
ವಲಸೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ವಿವರಿಸಿ, ಕ್ರಮ ಕೈಗೊಳ್ಳಲು ಕೋರಿ ಸಾಮಾಜಿಕ ಕಾರ್ಯಕರ್ತರಾದ ಹರ್ಷ ಮಂದೇರ್, ಅಂಜಲಿ ಭಾರದ್ವಾಜ್ ಮತ್ತು ಜಗದೀಪ್ ಛೋಕಾ ಅರ್ಜಿ ಸಲ್ಲಿಸಿದ್ದರು.