ಆಯಿಷಾ ಸುಲ್ತಾನ ವಿರುದ್ಧ ದೇಶದ್ರೋಹ ಪ್ರಕರಣ: ತನಿಖೆಗೆ ಇನ್ನಷ್ಟು ತಡೆ ಹೇರಲು ನಿರಾಕರಿಸಿದ ಕೇರಳ ಹೈಕೋರ್ಟ್
Photo: indianexpress
ತಿರುವನಂತಪುರಂ: ಲಕ್ಷದ್ವೀಪದ ಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನಾ ವಿರುದ್ಧದ ದೇಶದ್ರೋಹ ಪ್ರಕರಣದ ತನಿಖೆಗೆ ಇನ್ನಷ್ಟು ತಡೆ ಹೇರಲು ಕೇರಳ ಹೈಕೋರ್ಟ್ ಇಂದು ನಿರಾಕರಿಸಿದೆ.
ಕವರತ್ತಿ ಪೊಲೀಸರು ತನ್ನ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸಬೇಕೆಂದು ಕೋರಿ ಸುಲ್ತಾನ ಅವರ ಅಪೀಲನ್ನು ಪರಿಗಣಿಸಿದ ನ್ಯಾಯಾಲಯ, ಈ ಪ್ರಕರಣದ ತನಿಖೆ ಆರಂಭಿಕ ಹಂತದಲ್ಲಿದೆ ಹಾಗೂ ತನಿಖೆ ಪೂರ್ಣಗೊಳ್ಳಲು ಹೆಚ್ಚು ಸಮಯ ಅಗತ್ಯವಾಗಬಹುದು ಎಂದು ಹೇಳಿದೆ. ತನಿಖೆಯ ಕುರಿತು ವಿವರಗಳನ್ನು ನೀಡುವಂತೆಯೂ ಲಕ್ಷದ್ವೀಪ ಆಡಳಿತಕ್ಕೆ ನ್ಯಾಯಾಲಯ ಸೂಚಿಸಿದೆ.
ತನಿಖೆ ಆರಂಭಿಕ ಹಂತದಲ್ಲಿರುವುದರಿಂದ ತಡೆ ಹೇರುವುದಕ್ಕೆ ಇದಕ್ಕೂ ಮುಂಚೆ ಲಕ್ಷದ್ವೀಪ ಆಡಳಿತದ ವಕೀಲರು ಆಕ್ಷೇಪಿಸಿದರು.
ಪ್ರಕರಣದಲ್ಲಿ ಕಳೆದ ವಾರ ಕೇರಳ ಹೈಕೋರ್ಟ್ ಸುಲ್ತಾನ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿತ್ತು.
ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರನ್ನು 'ಕೇಂದ್ರ ನಿಯೋಜಿಸಿದ ಜೈವಿಕ ಅಸ್ತ್ರ' ಎಂದು ಆಕೆ ನೀಡಿದ್ದ ಹೇಳಿಕೆಯನ್ನು ವಿರೋಧಿಸಿ ಬಿಜೆಪಿಯ ಲಕ್ಷದ್ವೀಪ ಘಟಕದ ಅಧ್ಯಕ್ಷ ಸಿ ಅಬ್ದುಲ್ ಖಾದರ್ ಹಾಜಿ ಅವರು ಸಲ್ಲಿಸಿದ್ದ ಅಪೀಲಿನ ಮೇರೆಗೆ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಮಲಯಾಳಂ ಟಿವಿ ವಾಹಿನಿಯೊಂದು ನಡೆಸಿದ ಚರ್ಚಾ ಕಾರ್ಯಕ್ರಮದಲ್ಲಿ ಆಯಿಷಾ ಸುಲ್ತಾನ ಮೇಲಿನ ಹೇಳಿಕೆ ನೀಡಿದ್ದರು.