ಯುಎಪಿಎ ಅಡಿ ಪ್ರಕರಣಗಳ ಪುನರ್ ಪರಿಶೀಲನೆಗೆ ಉ.ಪ್ರದೇಶ ಸರಕಾರದಿಂದ ದ್ವಿಸದಸ್ಯ ಸಮಿತಿ ರಚನೆ
ಲಕ್ನೋ,ಜು.3: ರಾಜ್ಯ ಪೊಲೀಸ್ ನ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ವು ತನಿಖೆ ನಡೆಸುತ್ತಿರುವ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯಡಿಯ ಪ್ರಕರಣಗಳಲ್ಲಿ ಕಾನೂನು ಕ್ರಮಕ್ಕೆ ಮಂಜೂರಿಯ ಮುನ್ನ ಸಾಕ್ಷಾಧಾರಗಳು ಸೇರಿದಂತೆ ಅವುಗಳ ಸ್ವತಂತ್ರ ಪುನರ್ಪರಿಶೀಲನೆಗಾಗಿ ಇಬ್ಬರು ಸದಸ್ಯರ ಸಮಿತಿಯನ್ನು ಉತ್ತರ ಪ್ರದೇಶ ಸರಕಾರವು ನೇಮಕಗೊಳಿಸಿದೆ ಎಂದು ಗೃಹ ಕಾರ್ಯದರ್ಶಿ ಬಿ.ಡಿ.ಪೌಲ್ಸನ್ ಅವರು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸಮಿತಿಯು ಒಂದು ವರ್ಷದ ಅಧಿಕಾರಾವಧಿಯನ್ನು ಹೊಂದಿದ್ದು,ಯುಎಪಿಎ ಅಡಿ ಪ್ರಕರಣ ದಾಖಲಾಗಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಮಂಜೂರಾತಿಯ ಬಗ್ಗೆಯೂ ಸರಕಾರಕ್ಕೆ ಶಿಫಾರಸುಗಳನ್ನು ಮಾಡಲಿದೆ. ಯುಎಪಿಎ ಹೇರಲಾದ ಪ್ರಕರಣಗಳಲ್ಲಿ ಪುನರ್ಪರಿಶೀಲನೆಗಾಗಿ ಸಮಿತಿಯನ್ನು ರಚಿಸಲು ಕಾಯ್ದೆಯಲ್ಲಿ ಅವಕಾಶವಿದೆ ಎಂದರು.
ಸಮಿತಿಯು ನಿವೃತ್ತ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಮತ್ತು ನಿವೃತ್ತ ಪ್ರಧಾನ ಕಾರ್ಯದರ್ಶಿ (ಕಾನೂನು)ಗಳನ್ನು ಸದಸ್ಯರನ್ನಾಗಿ ಹೊಂದಿರಲಿದೆ ಎಂದು ಶುಕ್ರವಾರ ಅಧಿಕೃತ ಹೇಳಿಕೆಯು ತಿಳಿಸಿತ್ತು.
Next Story