ದೇವಸ್ಥಾನದ ಬಳಿ ಊಟದ ವಿಷಯದಲ್ಲಿ ಜಗಳ: ಯುವಕನ ಥಳಿಸಿ ಹತ್ಯೆಗೈದ ದುಷ್ಕರ್ಮಿಗಳು
ಲಕ್ನೊ: ದೇವಸ್ಥಾನವೊಂದರ ಬಳಿ ಗುರುವಾರ ಯುವಕನೋರ್ವನನ್ನು ಥಳಿಸಿ ಕೊಂದ ಆರೋಪದ ಮೇಲೆ ಮೂವರನ್ನು ಗಾಝಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ನಿತಿನ್ ಶರ್ಮಾ, ಅಶ್ವಿನಿ ಶರ್ಮಾ ಮತ್ತು ಆಕಾಶ್ ತ್ಯಾಗಿ ಅವರು ಗಂಗಾ ನಹರ್ ಘಾಟ್ ನಲ್ಲಿ ಊಟ ಮಾಡಲು ಮುಂದಾಗಿದ್ದರು. ಆಗ ಅಲ್ಲಿಗೆ ಬಂದ ಸಂತ್ರಸ್ತ ಪ್ರವೀಣ್ ಸೈನಿ ಬೇರೆ ಸ್ಥಳದಲ್ಲಿ ಊಟ ಮಾಡುವಂತೆ ಹೇಳಿದರು. ವಾದ-ವಿವಾದವು ತಕ್ಷಣವೇ ಹಿಂಸಾತ್ಮಕ ರೂಪ ತಳೆದಿದ್ದು, ಪ್ರವೀಣ್ ಸೈನಿ (22) ಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
"ಆರೋಪಿಗಳು ಮದ್ಯ ಸೇವಿಸಿದ ಸ್ಥಿತಿಯಲ್ಲಿದ್ದರು. ಪ್ರವೀಣ್ ಹಾಗೂ ಅವನ ಸ್ನೇಹಿತರನ್ನು ಕೋಲು ಮತ್ತು ರಾಡ್ ಗಳಿಂದ ಥಳಿಸಿ ಗಂಭೀರ ಗಾಯಗಳನ್ನು ಉಂಟು ಮಾಡಿದರು. ನಾವು ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ ಹಾಗೂ ಹೆಚ್ಚಿನ ತನಿಖೆ ಬಾಕಿ ಇದೆ ”ಎಂದು ಸದರ್ ವೃತ್ತ ಅಧಿಕಾರಿ ಕಮಲೇಶ್ ನರೈನ್ ಪಾಂಡೆ ಹೇಳಿದ್ದಾರೆ.
ಪೊಲೀಸರ ಪ್ರಕಾರ, ಮುಖ್ಯ ಆರೋಪಿ ನಿತಿನ್ ನನ್ನು ಸೇನೆಯಲ್ಲಿ ನೇಮಕ ಮಾಡಲಾಗಿದ್ದು, ಆತ ರಜೆಯಲ್ಲಿದ್ದ. ಮೃತ ಪ್ರವೀಣ್ ಮೀರತ್ ಮೂಲದವನು. ಆತ ದೇವಾಲಯ ಮತ್ತು ಹತ್ತಿರದ ಅಂಗಡಿಗಳಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ
ಪ್ರವೀಣ್ ಮತ್ತು ಅವನ ಇಬ್ಬರು ಸ್ನೇಹಿತರಾದ ದೇವೇಂದರ್ ಮತ್ತು ವಿನೋದ್ ಸಮೀಪದಲ್ಲಿದ್ದ ನಿತಿನ್ ಮತ್ತು ಸಹ ಆರೋಪಿಗಳೊಂದಿಗೆ ವಾಗ್ವಾದ ನಡೆಸಿದರು. ಅದು ಉಲ್ಬಣಗೊಂಡಿತು. ಕೋಪದಿಂದ ಮೂವರು ವ್ಯಕ್ತಿಗಳ ಮೇಲೆ ರಾಡ್ ಮತ್ತು ಪೈಪ್ಗಳಿಂದ ಹಲ್ಲೆ ನಡೆಸಿದ್ದು, ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಪ್ರವೀಣ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.