"ಮೇಕೆದಾಟುವಿನಲ್ಲಿ ನೂತನ ಅಣೆಕಟ್ಟು ಕಟ್ಟಲು ಕರ್ನಾಟಕಕ್ಕೆ ಅವಕಾಶ ನೀಡಬೇಡಿ"
ಕೇಂದ್ರಕ್ಕೆ ತಮಿಳುನಾಡಿನ ಸರ್ವ ಪಕ್ಷಗಳ ಸಭೆ ಆಗ್ರಹ
ಚೆನ್ನೈ, ಜು. 12: ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ನೂತನ ಅಣೆಕಟ್ಟು ಕಟ್ಟುವ ಕರ್ನಾಟಕ ಸರಕಾರದ ನಿರಂತರ ಪ್ರಯತ್ನವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅಧ್ಯಕ್ಷತೆಯ ರಾಜ್ಯದ ಸರ್ವ ಪಕ್ಷಗಳ ಶಾಸಕಾಂಗ ಸಭೆ ಸೋಮವಾರ ಖಂಡಿಸಿದೆ ಹಾಗೂ ಇದಕ್ಕೆ ಅನುಮತಿ ನೀಡದಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.
ರಾಜ್ಯದ ಜನರ ಸಂಘಟಿತ ವಿರೋಧವನ್ನು ಕೇಂದ್ರ ಸರಕಾರಕ್ಕೆ ತಿಳಿಸಲು ಸರ್ವ ಪಕ್ಷಗಳ ನಿಯೋಗ ಶೀಘ್ರದಲ್ಲಿ ಹೊಸದಿಲ್ಲಿಗೆ ಭೇಟಿ ನೀಡಲಿದೆ. ಈ ಸಂಬಂಧ ರಾಜ್ಯ ಸರಕಾರ ಕಾನೂನಾತ್ಮಕ ಹಾಗೂ ಸುಪ್ರೀಂ ಕೋರ್ಟ್ ಮುಂದೆ ದೂರು ಸಲ್ಲಿಸುವುದು ಸೇರಿದಂತೆ ಇತರ ಕ್ರಮಗಳನ್ನು ಮುಂದುವರಿಸಲು ಕೂಡ ಸಭೆ ನಿರ್ಧರಿಸಿದೆ.
ಮೇಕೆದಾಟು ಯೋಜನೆ ಸುಪ್ರೀಂ ಕೋರ್ಟ್ ನ ತೀರ್ಪಿನ ಉಲ್ಲಂಘನೆಯ ಪ್ರಯತ್ನ ಹಾಗೂ ಇದು ಭಾರತದ ಸಂವಿಧಾನಕ್ಕೆ ಸವಾಲು ಒಡ್ಡುತ್ತದೆ ಎಂದು ಸಭೆಯಲ್ಲಿ ಅಂಗೀಕರಿಸಲಾದ ಮೂರು ನಿರ್ಣಯಗಳಲ್ಲಿ ಒಂದು ಹೇಳಿದೆ. ಈ ಅಣೆಕಟ್ಟು ತಮಿಳುನಾಡಿನ ಜನರ ಮೇಲೆ ದುಷ್ಪರಿಣಾಮ ಉಂಟು ಮಾಡಬಹುದು ಎಂದು ಹೇಳಿರುವ ನಿರ್ಣಯ, ಕೇಂದ್ರ ಸಚಿವಾಲಯ ಈ ಯೋಜನೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದೆ.
ಮೇಕೆದಾಟುವಿನಲ್ಲಿ ಹೊಸ ಅಣೆಕಟ್ಟು ಕಟ್ಟುವುದನ್ನು ತಡೆಯಲು ರಾಜ್ಯ ಸರಕಾರಕ್ಕೆ ತಮ್ಮ ಸಂಪೂರ್ಣ ಸಹಕಾರ ಹಾಗೂ ಬೆಂಬಲವನ್ನು ತಮಿಳುನಾಡಿನ ಎಲ್ಲ ರಾಜಕೀಯ ಪಕ್ಷಗಳು ನೀಡಲಿವೆ ಎಂದು ಇನ್ನೊಂದು ನಿರ್ಣಯ ಹೇಳಿದೆ.