ಕೋವಿಡ್-19ನಿಂದ ಚೇತರಿಸಿಕೊಂಡ ಸಮಾಜವಾದಿ ಪಕ್ಷದ ಆಝಂ ಖಾನ್, ಅವರ ಪುತ್ರ ಮರಳಿ ಜೈಲಿಗೆ
ಲಕ್ನೋ: ಕೋವಿಡ್ -19 ನಿಂದ ಚೇತರಿಸಿಕೊಂಡ ನಂತರ ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಆಝಂ ಖಾನ್ ಹಾಗೂ ಅವರ ಪುತ್ರ ಅಬ್ದುಲ್ಲಾ ಖಾನ್ ಅವರನ್ನು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಅವರನ್ನು ಸೀತಾಪುರ ಜಿಲ್ಲಾ ಜೈಲಿಗೆ ಕರೆದೊಯ್ಯಲಾಗುತ್ತಿದೆ. ಈ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
72ರ ವಯಸ್ಸಿನ ರಾಂಪುರ ಲೋಕಸಭಾ ಸಂಸದ ಆಝಂ ಖಾನ್ ಹಾಗೂ ಅವರ 30ರ ವಯಸ್ಸಿನ ಪುತ್ರನನ್ನು ಮೇ 9 ರಂದು ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ.
" ಆಝಂ ಖಾನ್ ಮತ್ತು ಅವರ ಮಗನ ಆರೋಗ್ಯ ಸ್ಥಿತಿಗಳಲ್ಲಿನ ಸುಧಾರಣೆಯನ್ನು ನೋಡಿ ಅವರನ್ನು ಜುಲೈ 13 ರಂದು ಬೆಳಗ್ಗೆ 10.30 ಕ್ಕೆ ಮೆದಾಂತ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಅವರು ಮತ್ತು ಅವರ ಮಗ ಈಗ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ" ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಆಝಂ ಖಾನ್ ಹಾಗೂ ಅವರ ಮಗನಿಗೆ ಎಪ್ರಿಲ್ 30 ರಂದು ಕೋವಿಡ್ ಪಾಸಿಟಿವ್ ಎಂದು ದೃಢಪಡಿಸಲಾಗಿದೆ. ಮೇ 9 ರಂದು ಜೈಲಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ರಾಕೇಶ್ ಕಪೂರ್ ಮಂಗಳವಾರ ಹೇಳಿದರು.
ಇಬ್ಬರನ್ನು ಮತ್ತೆ ಜೈಲಿಗೆ ಕರೆತರಲಾಗುತ್ತಿದೆ ಎಂದು ಸೀತಾಪುರ ಜಿಲ್ಲಾ ಜೈಲು ಅಧೀಕ್ಷಕ ಸುರೇಶ್ ಕುಮಾರ್ ಸಿಂಗ್ ಮಂಗಳವಾರ ಪಿಟಿಐಗೆ ತಿಳಿಸಿದ್ದಾರೆ.