ಸುಪ್ರೀಂಕೋರ್ಟ್ ಎಚ್ಚರಿಕೆಯ ಬಳಿಕ ಕನ್ವರ್ ಯಾತ್ರೆ ರದ್ದುಪಡಿಸಿದ ಉತ್ತರಪ್ರದೇಶ
ಹೊಸದಿಲ್ಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣ ಉತ್ತರ ಪ್ರದೇಶದಲ್ಲಿ ಈ ವರ್ಷದ ಕನ್ವರ್ ಯಾತ್ರೆಯನ್ನು ರದ್ದುಗೊಳಿಸಲು ಕನ್ವರ್ ಸಂಘ ನಿರ್ಧರಿಸಿದೆ. ಉತ್ತರಪ್ರದೇಶ ಸರಕಾರ ದೊಂದಿಗೆ ಸಮಾಲೋಚಿಸಿ ಶನಿವಾರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ವರ್ಷ ರಾಜ್ಯದಲ್ಲಿ ವಾರ್ಷಿಕ ಕನ್ವರ್ ಯಾತ್ರೆಯನ್ನು "ಸಾಂಕೇತಿಕ" ಆಚರಣೆಗೆ ಅನುಮತಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.
ಉತ್ತರ ಪ್ರದೇಶ ಆಡಳಿತವನ್ನು ಪ್ರತಿನಿಧಿಸಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವ್ನಿಶ್ ಅವಸ್ಥಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಮಾಹಿತಿ) ನವನೀತ್ ಸೆಹಗಲ್ ಹಾಗೂ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮುಕುಲ್ ಗೋಯಲ್ ಅವರು ಕನ್ವರ್ ಸಂಘದ ಪ್ರತಿನಿಧಿಗಳೊಂದಿಗೆ ಶನಿವಾರ ಸಭೆ ನಡೆಸಿದರು.
"ಉತ್ತರ ಪ್ರದೇಶ ಸರಕಾರದ ಮನವಿಯ ಮೇರೆಗೆ ಕನ್ವರ್ ಯಾತ್ರೆಯನ್ನು ಕನ್ವರ್ ಸಂಘಗಳು ರದ್ದುಗೊಳಿಸಿವೆ" ಎಂದು ನವನೀತ್ ಸೆಹಗಲ್ India Today tv ಗೆ ತಿಳಿಸಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕ ರೋಗದ ಮೂರನೇ ಅಲೆಯನ್ನು ಭಾರತ ಎದುರು ನೋಡುತ್ತಿರುವ ಸಮಯದಲ್ಲಿ ಅದು ಉಂಟುಮಾಡುವ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ವರ್ಷದ ಯಾತ್ರೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ಶನಿವಾರದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.