ಮುಂಬೈ: ಮಳೆಗೆ ಬಲಿಯಾದವರ ಕುಟುಂಬಗಳಿಗೆ ಐದು ಲ.ರೂ.ಪರಿಹಾರ ಘೋಷಿಸಿದ ಸಿಎಂ
ಮುಂಬೈ,ಜು.18: ಶನಿವಾರ ರಾತ್ರಿ ಮುಂಬೈನಲ್ಲಿ ಸುರಿದ ಭಾರೀಮಳೆಯಿಂದಾಗಿ ಮನೆಗಳು ಕುಸಿದು ಬಿದ್ದು ಹಲವಾರು ಜನರು ಸಾವನ್ನಪ್ಪಿರುವ ಬಗ್ಗೆ ತೀವ್ರ ದುಃಖವನ್ನು ವ್ಯಕ್ತಪಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರು,ಮೃತರ ಕುಟುಂಬಗಳಿಗೆ ತಲಾ ಐದು ಲ.ರೂ.ಪರಿಹಾರವನ್ನು ಮತ್ತು ಗಾಯಾಳುಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸುವುದಾಗಿ ಪ್ರಕಟಿಸಿದ್ದಾರೆ.
ಭಾರೀಮಳೆಯಿಂದಾಗಿ ಹಲವಾರು ಮನೆಗಳು ಕುಸಿದು ಬಿದ್ದಿದ್ದು 25 ಜನರು ಸಾವನ್ನಪ್ಪಿದ್ದಾರೆ. ನಗರದ ಹಲವಾರು ಕಡೆ ನೆರೆ ನೀರು ತುಂಬಿದ್ದು, ರವಿವಾರ ಲೋಕಲ್ ರೈಲುಗಳು ಮತ್ತು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.
ಶನಿವಾರ ರಾತ್ರಿ ಭಾರೀ ಮಳೆ ಆರಂಭಗೊಂಡಾಗಿನಿಂದಲೇ ವಿಪತ್ತು ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಠಾಕ್ರೆ, ಬೃಹನ್ಮುಂಬೈ ಮಹಾನಗರ ಪಾಲಿಕೆಯ ಆಯುಕ್ತರಿಂದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.
ಮೈಥಿ ನದಿ ದಂಡೆಯಲ್ಲಿಯ ಮತ್ತು ಸಮೀಪದ ಪ್ರದೇಶಗಳ ನಿವಾಸಿಗಳನ್ನು ಶೀಘ್ರ ತೆರವುಗೊಳಿಸುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.