ಏಜೆನ್ಸಿಗಳು ತಮ್ಮ ಕೆಲಸ ಮಾಡುತ್ತವೆ: ‘ದೈನಿಕ್ ಭಾಸ್ಕರ್’ ಮೇಲೆ ಐಟಿ ದಾಳಿ ಬಗ್ಗೆ ಕೇಂದ್ರದ ಉತ್ತರ
ಹೊಸದಿಲ್ಲಿ: ತೆರಿಗೆ ವಂಚನೆ ಆರೋಪದ ಮೇಲೆ ಮಾಧ್ಯಮ ಸಮೂಹ ದೈನಿಕ್ ಭಾಸ್ಕರ್ ಹಾಗೂ ಉತ್ತರ ಪ್ರದೇಶ ಮೂಲದ ಸುದ್ದಿ ವಾಹಿನಿ ಮೇಲೆ ಇಂದು ಬೆಳಿಗ್ಗೆ ದೇಶದಾದ್ಯಂತ ಆದಾಯ ತೆರಿಗೆ ತಂಡಗಳು ದಾಳಿ ನಡೆಸಿವೆ. ಮಾಧ್ಯಮಗಳ ಮೇಲೆ ಐಟಿ ದಾಳಿಯನ್ನು ವಿರೋಧ ಪಕ್ಷಗಳು ಖಂಡಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಖಂಡನೆಗೆ ಕಾರಣವಾಗುತ್ತಿದ್ದಂತೆ ಪ್ರತಿಕ್ರಿಯೆಗೆ ಮುಂದಾಗಿರುವ ಮಾಹಿತಿ ಹಾಗೂ ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಐಟಿ ದಾಳಿಗೂ ಸರಕಾರಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.
"ಏಜೆನ್ಸಿಗಳು ತಮ್ಮದೇ ಆದ ಕೆಲಸವನ್ನು ಮಾಡುತ್ತವೆ, ನಾವು ಅದರ ಕಾರ್ಯಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಯಾವುದೇ ಘಟನೆಯ ಬಗ್ಗೆ ವರದಿ ಮಾಡುವ ಮೊದಲು ಸತ್ಯಗಳನ್ನು ಕಂಡುಹಿಡಿಯಬೇಕು ಎಂದು ನಾನು ಹೇಳಲು ಬಯಸುತ್ತೇನೆ. ಕೆಲವೊಮ್ಮೆ ಮಾಹಿತಿಯ ಕೊರತೆಯು ದಾರಿ ತಪ್ಪಿಸುತ್ತದೆ" ಎಂದು ಅನುರಾಗ್ ಠಾಕೂರ್ ಸುದ್ದಿಗಾರರಿಗೆ ತಿಳಿಸಿದರು .
ದಾಳಿ ನಡೆದ ಕೆಲವೇ ಗಂಟೆಗಳ ನಂತರ ಸರಕಾರದಿಂದ ಬಂದಿರುವ ಅಧಿಕೃತ ಪ್ರತಿಕ್ರಿಯೆ ಇದಾಗಿದೆ. ಆದಾಯ ತೆರಿಗೆ ಇಲಾಖೆಯಿಂದ ಅಥವಾ ಅದರ ನೀತಿ ನಿರೂಪಣಾ ಸಂಸ್ಥೆಯಾದ ಕೇಂದ್ರೀಯ ನೇರ ತೆರಿಗೆ ಮಂಡಳಿಯಿಂದ (ಸಿಬಿಡಿಟಿ) ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.