ಅಲೋಪತಿ ಟೀಕಿಸಿದ್ದ ರಾಮ್ ದೇವ್ ವಿರುದ್ಧದ ಮನವಿ ದಿಲ್ಲಿ ಹೈಕೋರ್ಟ್ ನಿಂದ ವಿಚಾರಣೆ
ಹೊಸದಿಲ್ಲಿ, ಜು. 25: ಕೋವಿಡ್ ಸಾಂಕ್ರಾಮಿಕ ರೋಗದ ನಡುವೆ ಅಲೋಪತಿ ವಿರುದ್ಧ ಹೇಳಿಕೆ ನೀಡುವ ಮೂಲಕ ತಪ್ಪು ಮಾಹಿತಿ ಹರಡುತ್ತಿರುವುದಾಗಿ ಆರೋಪಿಸಿ ಬಾಬಾ ರಾಮ್ದೇವ್ ವಿರುದ್ಧ 7 ವೈದ್ಯರ ಸಂಘಟನೆಗಳು ಸಲ್ಲಿಸಿದ ಮನವಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಸೋಮವಾರ ವಿಚಾರಣೆ ನಡೆಸಲಿದೆ. ತಪ್ಪು ಮಾಹಿತಿ ನೀಡಿದ್ದಾರೆ ಎಂದು ಹೇಳಲಾದ ವೀಡಿಯೋ ದಾಖಲೆಯನ್ನು ಸಲ್ಲಿಸುವಂತೆ ವೈದ್ಯರ ಸಂಘಟನೆಗಳ ಪರ ನ್ಯಾಯವಾದಿಗೆ ಈ ಹಿಂದೆ ನಿರ್ದೇಶನ ನೀಡಿದ್ದ ನ್ಯಾಯಮೂರ್ತಿ ಸಿ. ಹರಿ ಶಂಕರ್ ಅವರು ಮನವಿಯ ವಿಚಾರಣೆ ನಡೆಸಲಿದ್ದಾರೆ.
ಕೋವಿಡ್ ಸೋಂಕಿಗೆ ಒಳಗಾಗಿ ಹಲವು ಜನರು ಸಾವನ್ನಪ್ಪಲು ಅಲೋಪತಿ ಕಾರಣ ಹಾಗೂ ಅಲೋಪತಿ ವ್ಯೆದ್ಯರು ರೋಗಿಗಳ ಸಾವಿಗೆ ಕಾರಣವಾಗುತ್ತಿದ್ದಾರೆ ಎಂದು ಹೇಳುವ ಮೂಲಕ ರಾಮ್ದೇವ್ ಅವರು ಸಾರ್ವಜನಿಕರನ್ನು ದಾರಿ ತಪ್ಪಿಸಿದ್ದಾರೆ ಹಾಗೂ ತಪ್ಪು ಮಾಹಿತಿ ನೀಡಿದ್ದಾರೆ ಎಂದು ವೈದ್ಯರ ಸಂಘಟನೆಗಳು ಆರೋಪಿಸಿವೆ. ಅಲೋಪತಿ ಚಿಕಿತ್ಸೆ ಮಾತ್ರವಲ್ಲದೆ, ಕೋವಿಡ್ ಲಸಿಕೆಯ ಸುರಕ್ಷಿತತೆ ಹಾಗೂ ಪರಿಣಾಮಕಾರಿತ್ವದ ಬಗ್ಗೆ ಕೂಡ ರಾಮ್ ದೇವ್ ಅವರು ಸಾರ್ವಜನಿಕರ ಮನಸ್ಸಿನಲ್ಲಿ ಅನುಮಾನಗಳನ್ನು ಬಿತ್ತುತ್ತಿದ್ದಾರೆ ಎಂದು ಮನವಿ ಪ್ರತಿಪಾದಿಸಿದೆ.