ಪೌರತ್ವ ತಿದ್ದುಪಡಿ ಕಾಯಿದೆ: ನಿಯಮ ರೂಪಿಸಲು ಜನವರಿ 9ರ ತನಕ ಸಮಯ ಕೇಳಿದ ಕೇಂದ್ರ
ಹೊಸದಿಲ್ಲಿ : ಸಂಸತ್ತು 2019ರಲ್ಲಿ ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯಿದೆಗೆ ಸಂಬಂಧಿಸಿದ ನಿಯಮಗಳನ್ನು ರೂಪಿಸಿಲು ಕೇಂದ್ರ ಸರಕಾರ ಜನವರಿ 9ರ ತನಕ ಸಮಯಾವಕಾಶದ ವಿಸ್ತರಣೆಯನ್ನು ಕೇಳಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ ಇಂದು ಲೋಕಸಭೆಗೆ ತಿಳಿಸಿದ್ದಾರೆ.
ಸಿಎಎ ನಿಯಮಗಳನ್ನು ರೂಪಿಸಿ ಅದರ ಕುರಿತು ಅಧಿಸೂಚನೆ ಹೊರಡಿಸುವ ಗಡುವನ್ನು ಸರಕಾರ ಮೀರಿದೆಯೇ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಅವರು ಕೇಳಿದ ಪ್ರಶ್ನೆಗೆ ಸಚಿವರು ಮೇಲಿನಂತೆ ಉತ್ತರಿಸಿದ್ದಾರೆ.
"ಪೌರತ್ವ ತಿದ್ದುಪಡಿ ಕಾಯಿದೆ 2019ರ ಅಧಿಸೂಚನೆಯನ್ನು 12.12.2019ರಲ್ಲಿ ಹೊರಡಿಸಲಾಗಿದೆ ಹಾಗೂ ಅದು 10.01.2020ರಿಂದ ಜಾರಿಗೊಂಡಿದೆ" ಎಂದು ಸಚಿವರು ತಿಳಿಸಿದ್ದಾರೆ.
ಸಿಎಎ ನಿಯಮಾವಳಿಗಳನ್ನು ರೂಪಿಸಲು ಸರಕಾರ ಇದು ಐದನೇ ಬಾರಿ ಸಮಯಾವಕಾಶದ ವಿಸ್ತರಣೆಯನ್ನು ಕೇಳಿದಂತಾಗಿದೆ.
ನಿಯಮಗಳ ಪ್ರಕಾರ ಯಾವುದೇ ಕಾನೂನಿಗೆ ಸಂಬಂಧಿಸಿದ ನಿಯಮಗಳನ್ನು, ಕಾನೂನಿಗೆ ರಾಷ್ಟ್ರಪತಿಗಳ ಅಂಗೀಕಾರ ದೊರೆತ ಆರು ತಿಂಗಳೊಳಗೆ ರೂಪಿಸಬೇಕಿದೆ ಇಲ್ಲವೇ ವಿಸ್ತರಣೆ ಕೋರಬೇಕಿದೆ.