ಬಿಜೆಪಿ ಸರಕಾರಗಳು ಜಾತಿ, ಕುಟುಂಬಕ್ಕಾಗಿ ಕೆಲಸ ಮಾಡುವುದಿಲ್ಲ: ಅಮಿತ್ ಶಾ
ಲಕ್ನೋ: ಬಿಜೆಪಿ ಸರಕಾರಗಳು ಜಾತಿ, ಕುಟುಂಬದ ಆಧಾರದ ಮೇಲೆ ಕೆಲಸ ಮಾಡುವುದಿಲ್ಲ, ಆದರೆ ಬಡವರ ಅಭಿವೃದ್ಧಿ,ಕಾನೂನು ಹಾಗೂ ಸುವ್ಯವಸ್ಥೆಯನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರವಿವಾರ ಪ್ರತಿಪಾದಿಸಿದ್ದಾರೆ.
ಉತ್ತರಪ್ರದೇಶ ರಾಜ್ಯ ವಿಧಿವಿಜ್ಞಾನ ಸಂಸ್ಥೆಗೆ ಶಿಲಾನ್ಯಾಸ ನಡೆಸಿದ ನಂತರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶಾ, ಕಾನೂನು ಹಾಗೂ ಸುವ್ಯವಸ್ಥೆಯ ದೃಷ್ಟಿಯಿಂದ ರಾಜ್ಯವನ್ನು ಅಗ್ರಸ್ಥಾನಕ್ಕೆ ಕೊಂಡೊಯ್ದಿದ್ದಕ್ಕಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಶ್ಲಾಘಿಸಿದರು.
"ಬಿಜೆಪಿ ಸರಕಾರಗಳು ಜಾತಿ, ಕುಟುಂಬಗಳ ಆಧಾರದ ಮೇಲೆ ಕೆಲಸ ಮಾಡುವುದಿಲ್ಲ ಅಥವಾ ಅವರಿಗೆ ಹತ್ತಿರವಿರುವ ಜನರಿಗಾಗಿ ಕೆಲಸ ಮಾಡುವುದಿಲ್ಲ. ಬಿಜೆಪಿ ಸರಕಾರಗಳು ಬಡವರ ಅಭಿವೃದ್ಧಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಷ್ಕರಿಸಲು ಕೆಲಸ ಮಾಡುತ್ತವೆ" ಎಂದು ಶಾ ಹೇಳಿದರು.
"2019 ರವರೆಗೆ ಆರು ವರ್ಷಗಳ ಕಾಲ ನಾನು ಉತ್ತರಪ್ರದೇಶದಲ್ಲಿ ಸಾಕಷ್ಟು ಪ್ರಯಾಣ ಮಾಡಿದ್ದೇನೆ. ಆದ್ದರಿಂದ, ನನಗೆ ಹಿಂದಿನ ಉತ್ತರಪ್ರದೇಶ ಚೆನ್ನಾಗಿ ಗೊತ್ತು. ಇಂದು 2021 ರಲ್ಲಿ ಆದಿತ್ಯನಾಥ್ ಹಾಗೂ ಅವರ ತಂಡ ಉತ್ತರಪ್ರದೇಶವನ್ನು ಕಾನೂನಿನ ವಿಷಯದಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ದಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ’’ಅವರು ಹೇಳಿದರು.