ತ್ರಿಪುರ: ಗುಂಡುಹಾರಿಸಿಕೊಂಡು ಬಿಎಸ್ಎಫ್ ಯೋಧ ಆತ್ಮಹತ್ಯೆ
ಅಗರ್ತಲಾ,ಆ. 2: ತ್ರಿಪುರ ಜಿಲ್ಲೆಯ ಖೋವೈ ಜಿಲ್ಲೆಯಲ್ಲಿ ಗಡಿಭದ್ರತಾಪಡೆ (ಬಿಎಸ್ಎಫ್) ಯೋಧನೊಬ್ಬ ಬುಧವಾ ಸರ್ವಿಸ್ ರೈಫಲ್ ನಿಂದ ತನಗೆ ತಾನೇ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಯೋಧನನ್ನು 41 ವರ್ಷದ ಬಾಬುರಾಮ್ ಚೌಧುರಿ ಎಂದು ಗುರುತಿಸಲಾಗಿದೆ. ಮೂಲತಃ ರಾಜಸ್ಥಾನದ ಜೋಧಪುರದ ನಿವಾಸಿಯಾಗಿದ್ದು ಆತ ತ್ರಿಪುರದಲ್ಲಿ ಬಿಎಸ್ಎಫ್ನ 80ನೇ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದನು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ನಡೆದ ಸಂದರ್ಭ ಬಾಬುರಾಮ್ ಅವರು ಪಹಾರ್ಪುರ ಗಡಿ ಹೊರಠಾಣೆಯ ಬಳಿ ಪಹರೆದಾರನಾಗಿ ಇತರ ಮೂವರು ಯೋಧರೊಂದಿಗೆ ಕೆಲಸ ಮಾಡುತ್ತಿದ್ದ. ಬುಧವಾರ ನಸುಕಿನಲ್ಲಿ 5:00 ಗಂಟೆಗೆ ಆತ ಸರ್ವಿಸ್ ರೈಫಲ್ ನಿಂದ ತನಗೆ ತಾನೇ ಗುಂಡುಹಾರಿಸಿಕೊಂಡಿದ್ದಾನೆ. ಖೊವಾಯ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆಯೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ತ್ರಿಪುರದಲ್ಲಿ ಮಂಗಳವಾರ ನಿಷೇಧಿತ ಎನ್ಎಲ್ಎಫ್ಟಿ ಬಂಡುಕೋರರ ದಾಳಿಯಲ್ಲಿ ಇಬ್ಬರು ಅರೆಸೈನಿಕ ಪಡೆಯ ಯೋಧರು ಮೃತಪಟ್ಟ ಮರುದಿನವೇ ಈ ಘಟನೆ ನಡೆದಿದೆ.