"ಜನಸಂಖ್ಯೆಯನ್ನು ನಿಯಂತ್ರಿಸಿದ್ದಕ್ಕಾಗಿ ತಮಿಳುನಾಡಿನ ಲೋಕಸಭಾ ಸ್ಥಾನಗಳನ್ನು ಕಡಿತಗೊಳಿಸಿದ್ದು ಅನ್ಯಾಯ"
ಮದ್ರಾಸ್ ಹೈಕೋರ್ಟ್
ಚೆನ್ನೈ,ಆ.22: ತಮಿಳುನಾಡು ಕುಟುಂಬ ಕಲ್ಯಾಣ ಯೋಜನೆಗಳ ಮೂಲಕ ರಾಜ್ಯದ ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಕ್ಕೆ ಲೋಕಸಭೆಯಲ್ಲಿ ಅದರ ಪ್ರಾತಿನಿಧಿತ್ವವನ್ನು ಕಡಿತಗೊಳಿಸಿದ್ದು ಅನ್ಯಾಯವಾಗಿದೆ ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ಅಭಿಪ್ರಾಯ ವ್ಯಕ್ತಪಡಿಸಿದೆ.
ಸಂಸತ್ತಿನಲ್ಲಿ ರಾಜಕೀಯ ಪ್ರಾತಿನಿಧ್ಯವನ್ನು ಕಡಿಮೆಗೊಳಿಸುವ ಮೂಲಕ ಕೇಂದ್ರ ಸರಕಾರದ ಕುಟುಂಬ ಕಲ್ಯಾಣ ಯೋಜನೆಯನ್ನು ಯಶಸ್ವಿಯಾಗಿಸಿದ್ದನ್ನು ಜನರ ವಿರುದ್ಧ ಬಳಸಬಹುದೇ ಎಂದು ನ್ಯಾಯಮೂರ್ತಿಗಳಾದ ಎನ್.ಕಿರುಬಾಕರನ್ ಮತ್ತು ಬಿ.ಪುಗಳೇಂದಿ ಅವರ ಪೀಠವು ಆ.17ರ ತನ್ನ ಆದೇಶದಲ್ಲಿ ಪ್ರಶ್ನಿಸಿದೆ. ತೆಂಕಾಶಿ ಲೋಕಸಭಾ ಕ್ಷೇತ್ರವನ್ನು ಮೀಸಲಾತಿ ಮುಕ್ತಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಉಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. 50 ವರ್ಷಗಳಿಗೂ ಹೆಚ್ಚು ಕಾಲದಿಂದ ತೆಂಕಾಶಿ ಕ್ಷೇತ್ರವು ಎಸ್ಸಿ/ಎಸ್ಟಿಗಳಿಗೆ ಮೀಸಲಾಗಿದೆ.
ತಮಿಳುನಾಡು 1962ರವರೆಗೂ ಲೋಕಸಭೆಯಲ್ಲಿ 41 ಸದಸ್ಯರನ್ನು ಹೊಂದಿತ್ತು. ಆದರೆ 1967ರ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ಬಳಿಕ ರಾಜ್ಯದ ಜನಸಂಖ್ಯೆ ಕಡಿಮೆಯಾಗಿದ್ದರಿಂದ ಸಂಸದರ ಸಂಖ್ಯೆಯನ್ನು 39ಕ್ಕೆ ಇಳಿಸಲಾಗಿತ್ತು ಎಂದು ಬೆಟ್ಟು ಮಾಡಿದ ನ್ಯಾಯಾಲಯವು,ಲೋಕಸಭೆಯಲ್ಲಿ ಪ್ರಾತಿನಿಧ್ಯ ನಷ್ಟವನ್ನು ಎದುರಿಸುತ್ತಿರುವ ರಾಜ್ಯಗಳಿಗೆ ಹಣಕಾಸು ಪರಿಹಾರ ನೀಡಬೇಕು ಅಥವಾ ರಾಜ್ಯಸಭೆಯಲ್ಲಿ ಅವುಗಳ ಪ್ರಾತಿನಿಧ್ಯವನ್ನು ಹೆಚ್ಚಿಸಬೇಕು ಎಂದು ಹೇಳಿತು. 1967ರಿಂದ 14 ಸಾರ್ವತ್ರಿಕ ಚುನಾವಣೆಗಳಿಗೆ ಪ್ರತಿ ಅಭ್ಯರ್ಥಿಗೆ 200 ಕೋ.ರೂ.ಗಳ ನಷ್ಟವನ್ನು ಲೆಕ್ಕ ಹಾಕಿದ ನ್ಯಾಯಾಲಯವು ತಮಿಳುನಾಡಿಗೆ 5,600 ಕೋ.ರೂ.ಗಳ ಪರಿಹಾರ ನೀಡಿಕೆಯನ್ನು ಪ್ರಸ್ತಾಪಿಸಿತು.
ನೈಸರ್ಗಿಕ ಸಂಪನ್ಮೂಲಗಳ ತೀವ್ರ ಕೊರತೆಯನ್ನು ತಡೆಯಲು ಜನಸಂಖ್ಯಾ ನಿಯಂತ್ರಣವು ಮುಖ್ಯವಾಗಿದೆ ಎಂದು ಬೆಟ್ಟು ಮಾಡಿದ ಉಚ್ಚ ನ್ಯಾಯಾಲಯವು 138 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತವು ವಿಶ್ವದಲ್ಲಿ ಚೀನಾದ ನಂತರದ ಸ್ಥಾನದಲ್ಲಿದೆ. ಪ್ರಜಾಪ್ರಭುತ್ವವು ಓರ್ವ ವ್ಯಕ್ತಿಗೆ ಒಂದು ಮತ ಪದ್ಧತಿಯನ್ನು ಆಧರಿಸಿದರೆ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ರಾಜ್ಯಗಳು ಸಂಸತ್ತಿನಲ್ಲಿ ಹೆಚ್ಚು ಪ್ರಾತಿನಿಧ್ಯವನ್ನು ಪಡೆಯುತ್ತವೆ ಎಂದು ಹೇಳಿತು.