ಅಜ್ಞಾನಿ ಸಿಎಂ ಠಾಕ್ರೆಗೆ ಕಪಾಳಮೋಕ್ಷ ಮಾಡುವೆ ಎಂದಿದ್ದ ಕೇಂದ್ರ ಸಚಿವ ನಾರಾಯಣ್ ರಾಣೆ ವಿರುದ್ಧ ಎಫ್ಐಆರ್
ಉದ್ಧವ್ ಠಾಕ್ರೆ-ನಾರಾಯಣ್ ರಾಣೆ
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ದೇಶದ ಸ್ವಾತಂತ್ರ್ಯದ ವರ್ಷದ ಬಗ್ಗೆ ಅಜ್ಞಾನ ಇದೆ. ಭಾಷಣದ ವೇಳೆ ನಾನು ಅಲ್ಲಿರುತ್ತಿದ್ದರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಹೇಳಿದ್ದ ಕೇಂದ್ರ ಸಚಿವ ನಾರಾಯಣ್ ರಾಣೆ ಅವರ ವಿರುದ್ಧ 'ಎಫ್ಐಆರ್' ದಾಖಲಿಸಲಾಗಿದೆ. ಪುಣೆ, ನಾಸಿಕ್ ಹಾಗೂ ಮಹಾದ್ ನಲ್ಲಿ ದೂರುಗಳನ್ನು ದಾಖಲಿಸಲಾಗಿದೆ.
ಮುಖ್ಯಮಂತ್ರಿಗೆ ಸ್ವಾತಂತ್ರ್ಯದ ವರ್ಷ ಗೊತ್ತಿಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಅವರು ತಮ್ಮ ಭಾಷಣದ ಸಮಯದಲ್ಲಿ ಸ್ವಾತಂತ್ರ್ಯದ ವರ್ಷಗಳ ಬಗ್ಗೆ ವಿಚಾರಿಸಲು ಹಿಂದಕ್ಕೆ ವಾಲಿದರು. ನಾನು ಅಲ್ಲಿದ್ದಿದ್ದರೆ, ಅವರಿಗೆ ಕಪಾಳಮೋಕ್ಷ ಮಾಡುತ್ತಿದ್ದೆ "ಎಂದು ರಾಣೆ ಸೋಮವಾರ ರಾಯಗಡ ಜಿಲ್ಲೆಯಲ್ಲಿ ನಡೆದ ಬಿಜೆಪಿಯ ಜನ್ ಆಶೀರ್ವಾದ ಯಾತ್ರೆಯಲ್ಲಿ ಹೇಳಿದ್ದರು.
ಶಿವಸೇನೆಯ ಸ್ಥಳೀಯ ಮುಖ್ಯಸ್ಥರ ದೂರಿನ ಮೇರೆಗೆ ನಾಸಿಕ್ ಸೈಬರ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಅದರ ನಂತರ ಪೊಲೀಸ್ ಆಯುಕ್ತರು ಕೇಂದ್ರ ಸಚಿವರನ್ನು ಬಂಧಿಸಲು ಆದೇಶ ಹೊರಡಿಸಿದರು ಹಾಗೂ ಅದಕ್ಕಾಗಿ ಡಿಸಿಪಿ ಸಂಜಯ್ ಬಾರ್ಕುಂಡ್ ನೇತೃತ್ವದಲ್ಲಿ ತಂಡವನ್ನು ರಚಿಸಿದರು ಎಂದು ವರದಿಯಾಗಿದೆ.
ಯುವ ಸೇನೆಯ ದೂರಿನ ಮೇರೆಗೆ ಪುಣೆ ನಗರದ ಚತುರ್ಶೃಂಗಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಹಾಗೂ 505 ರ ಅಡಿಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಶಿವಸೇನಾ ಕಾರ್ಯಕರ್ತರು ನೀಡಿದ ದೂರಿನ ಆಧಾರದ ಮೇಲೆ ಮೂರನೇ ಎಫ್ಐಆರ್ ಅನ್ನು ಮಹಾದ್ ನಲ್ಲಿ ದಾಖಲಿಸಲಾಗಿದೆ.
ತನ್ನ ವಿರುದ್ಧ ಯಾವುದೇ ಕಾನೂನು ದೂರು ದಾಖಲಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಕೇಂದ್ರ ಸಚಿವ ರಾಣೆ ಹೇಳಿದ್ದಾರೆ.
"ನನ್ನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಸಾಮಾನ್ಯ ಮನುಷ್ಯನಲ್ಲ. ನಾನು ಯಾವುದೇ ಅಪರಾಧ ಮಾಡಿಲ್ಲ. ಆಗಸ್ಟ್ 15 ರ ಬಗ್ಗೆ ಯಾರಿಗಾದರೂ ತಿಳಿದಿಲ್ಲದಿದ್ದರೆ ಅದು ಅಪರಾಧವಲ್ಲವೇ? ನಾನು ಕಪಾಳಮೋಕ್ಷ ಮಾಡುತ್ತೇನೆ ಎಂದು ಹೇಳಿದ್ದೆ . ಇದು ಪದಗಳು ಮಾತ್ರ,ಇದು ಅಪರಾಧವಲ್ಲ’’ ಎಂದು ರಾಣೆ ಹೇಳಿದರು.