ಬಳೆ ಮಾರಾಟಗಾರನ ಮೇಲೆ ಹಲ್ಲೆ ಪ್ರಕರಣವು ವಿಧಾನಸಭಾ ಚುನಾವಣೆಗೆ ಮುಂಚಿನ ಧ್ರುವೀಕರಣ ಯತ್ನ: ಚಿದಂಬರಂ
ಹೊಸದಿಲ್ಲಿ: ಇಂದೋರ್ ನಲ್ಲಿ ಭಾನುವಾರ ಮುಸ್ಲಿಂ ಬಳೆ ಮಾರಾಟಗಾರನೊಬ್ಬನ ಮೇಲೆ ನಡೆದ ದಾಳಿ, ಮುಂದಿನ ವರ್ಷ ಹಲವು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಮತೀಯ ಸಂಘರ್ಷ, ಹಿಂಸೆ ಹಾಗೂ ಧ್ರುವೀಕರಣದ ಯತ್ನದ ಭಾಗವಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಪ್ರತಿಕ್ರಿಯಿಸಿದ್ದಾರೆ.
ಯಾವುದು ಸರಿ ಹಾಗೂ ಯಾವುದು ತಪ್ಪು ಎಂದು ನಿರ್ಧರಿಸುವ ಹಕ್ಕು ತಮಗಿದೆ ಎಂದು ಆತನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳು ಹೇಗೆ ನಿರ್ಧರಿಸಿದರು ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.
"ಗಾಝಿಯಾಬಾದ್, ಕಾನ್ಪುರ್ ಹಾಗೂ ಈಗ ಇಂದೋರ್. ರಾಜ್ಯ ಗೃಹ ಸಚಿವರು ಈ ರೀತಿಯ ಹಿಂಸೆಯನ್ನು ಸಮರ್ಥಿಸುತ್ತಾರಾದರೆ ಅವರೇಕೆ ಗೃಹ ಸಚಿವರ ಹುದ್ದೆಯಲ್ಲಿದ್ದಾರೆ?" ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.
"25 ವರ್ಷದ ಬಳೆ ಮಾರಾಟಗಾರ ಹಿಂದು ಹೆಸರನ್ನು ಬಳಸುತ್ತಿದ್ದ" ಎಂದು ಘಟನೆಯ ನಂತರ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು. ಘಟನೆಯನ್ನು ಖಂಡಿಸಿ ಕಾಂಗ್ರೆಸ್ ವಕ್ತಾರರಾದ ರಣದೀಪ್ ಸಿಂಗ್ ಸುರ್ಜೇವಾಲ, ಶಮಾ ಮೊಹಮ್ಮದ್, ಸಿಪಿಎಂ ನಾಯಕಿ ಸುಭಾಷಿಣಿ ಆಲಿ ಮುಂತಾದವರು ಟ್ವೀಟ್ ಮಾಡಿದ್ದಾರೆ.