ರೈತರ ಕುರಿತು ಐಎಎಸ್ ಅಧಿಕಾರಿ ಬಳಸಿದ ಪದ ಸರಿಯಿಲ್ಲ: ಹರ್ಯಾಣ ಮುಖ್ಯಮಂತ್ರಿ ಖಟ್ಟರ್
ಚಂಡೀಗಡ: ಕರ್ನಾಲ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲಿನ ಪೊಲೀಸ್ ಕ್ರಮವನ್ನು ಇಂದು ಸಮರ್ಥಿಸಿಕೊಂಡಿರುವ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಐಎಎಸ್ ಅಧಿಕಾರಿಯ "ಪದಗಳ ಆಯ್ಕೆ ಸರಿಯಿರಲಿಲ್ಲ'' ಎಂದು ಒಪ್ಪಿಕೊಂಡರು.
'ಪ್ರತಿಭಟನಾನಿರತ ರೈತರ ತಲೆಯನ್ನು ಒಡೆಯಿರಿ' ಎಂದು ಇತ್ತೀಚೆಗೆ ಪೊಲೀಸರಿಗೆ ಸೂಚಿಸಿರುವ ಐಎಎಸ್ ಅಧಿಕಾರಿಯೊಬ್ಬರ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿದ್ದು, ಈ ಕುರಿತು ಸೋಮವಾರ ಪ್ರತಿಕ್ರಿಯಿಸಿರುವ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ , "ಅಧಿಕಾರಿಯು ಬಳಸಿರುವ ಪದಗಳು ಸರಿಯಿರಲಿಲ್ಲ. ಆದರೆ, ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ನಿಯಂತ್ರಿಸಲು ಕಟ್ಟುನಿಟ್ಟನ್ನು ಕಾಯ್ದುಕೊಳ್ಳಬೇಕಾಗಿತ್ತು" ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
"ಅಧಿಕಾರಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬೇಕಾದರೆ, ಅದಕ್ಕೂ ಮೊದಲು ಜಿಲ್ಲಾಡಳಿತವು ಮೌಲ್ಯಮಾಪನ ಮಾಡಬೇಕಾಗುತ್ತದೆ. ಡಿಜಿಪಿ ಕೂಡ ಇದನ್ನು ಪರಿಶೀಲಿಸುತ್ತಿದ್ದಾರೆ. ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟನ್ನು ಖಾತ್ರಿಪಡಿಸಿಕೊಳ್ಳಬೇಕು" ಎಂದು ಅವರು ಹೇಳಿದರು.