ಸಿಎಎ ಪ್ರತಿಭಟನೆ ಆಯೋಜಿಸಲು ಯತ್ನಿಸಿದ್ದಕ್ಕೆ ಅಮಾನತು: ಸುಪ್ರೀಂ ಮೊರೆ ಹೋದ ವಿದ್ಯಾರ್ಥಿ
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಪ್ರತಿಭಟನೆ ಆಯೋಜಿಸಲು ಯತ್ನಿಸಿದ ಆರೋಪದ ಮೇಲೆ ಅಮಾನತುಗೊಂಡ ಖ್ವಾಜಾ ಮೊಯಿನುದ್ದೀನ್ ಚಿಷ್ತಿ ಉರ್ದು, ಅರಬಿ-ಫಾರ್ಸಿ ವಿವಿಯ ವಿದ್ಯಾರ್ಥಿಯೊಬ್ಬ, ವಿವಿಯ ಕ್ರಮವನ್ನು ಎತ್ತಿ ಹಿಡಿದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನ ಕದ ತಟ್ಟಿದ್ದಾನೆ.
ಜುಲೈ 23, 2021ರ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿ ತನಗೆ ತನ್ನ ಪದವಿ ಕೋರ್ಸಿನ ಅಂತಿಮ ಸೆಮೆಸ್ಟರ್ ಮುಗಿಸಲು ಅನುವು ಮಾಡಿಕೊಡಬೇಕೆಂದು ಕೋರಿ ಈ ಬಿಎ ವಿದ್ಯಾರ್ಥಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಮೇಲ್ಮನವಿ ಅರ್ಜಿಯಲ್ಲಿ ಕೋರಿದ್ದಾನೆ.
ವಿದ್ಯಾರ್ಥಿಯ ಹೇಳಿಕೆಯನ್ನು ದಾಖಲಿಸಿಕೊಳ್ಳದೆ ವಿವಿಯ ಉಪಕುಲಪತಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆಂದು ಅಪೀಲಿನಲ್ಲಿ ದೂರಲಾಗಿದೆ. ಅಡ್ವೊಕೇಟ್ ತಲ್ಹಾ ಅಬ್ದುಲ್ ರಹ್ಮಾನ್ ಹಾಗೂ ಅಡ್ವೊಕೇಟ್ ಹರ್ಷ್ ವಿ ಕೆಡಿಯಾ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದ್ದು, ಅರ್ಜಿದಾರರಿಗೆ ಯಾವುದೇ ಶೋಕಾಸ್ ನೋಟಿಸ್ ಅಥವಾ ಜಾರ್ಜ್ ಶೀಟ್ ಅನ್ನು ಒದಗಿಸಿಲ್ಲ. ಆತನ ವಿರುದ್ಧ ಇರುವ ಏಕೈಕ ಆರೋಪವೆಂದರೆ ಆತ ಪ್ರತಿಭಟನೆ ಸಂಘಟಿಸಲು ಪ್ರಯತ್ನಿಸಿದ್ದಾನೆ ಎನ್ನುವುದಾಗಿದೆ ಎಂದು ಆರೋಪಿಸಿದ್ದಾರೆ.