ಅಕಾಲಿದಳದ ಕಾರ್ಯಕ್ರಮ ಅಡ್ಡಿಪಡಿಸಲು ಮುಂದಾದ ರೈತರನ್ನು ಚದುರಿಸಲು ಪೊಲೀಸರಿಂದ ಜಲಫಿರಂಗಿ ಪ್ರಯೋಗ
Photo: Videograb/Indian Express
ಚಂಡಿಗಡ: ಪಂಜಾಬ್ನ ಮೊಗಾದಲ್ಲಿ ಶಿರೋಮಣಿ ಅಕಾಲಿದಳದ ಕಾರ್ಯಕ್ರಮವೊಂದರ ಒಳಗೆ ಬಲವಂತವಾಗಿ ನುಗ್ಗಲು ಯತ್ನಿಸಿದ ರೈತರ ಗುಂಪನ್ನು ಚದುರಿಸಲು ಪೊಲೀಸರು ಗುರುವಾರ ಜಲ ಫಿರಂಗಿಯನ್ನು ಬಳಸಿದರು. ಕಾರ್ಯಕ್ರಮದಲ್ಲಿ ಅಕಾಲಿದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
"ನಾವು ರೈತರಿಗೆ ಹಲವಾರು ಬಾರಿ ಎಚ್ಚರಿಕೆ ನೀಡಿದ್ದೇವೆ. ಆದರೆ ಕೆಲವು ಪ್ರತಿಭಟನಾಕಾರರು ಕಲ್ಲು ತೂರಾಟಕ್ಕೆ ಮುಂದಾದರು. ಬ್ಯಾರಿಕೇಡ್ಗಳನ್ನು ಮುರಿಯಲು ಪ್ರಯತ್ನಿಸಿದರು. ಕಲ್ಲು ತೂರಿದಾಗ, ನಾವು ಅವರನ್ನು ಚದುರಿಸಲು ಸಂಯಮದ ರೀತಿಯಲ್ಲಿ ಲಾಠಿ ಚಾರ್ಜ್ ನಡೆಸಿದೆವು ಹಾಗೂ ಜಲ ಫಿರಂಗಿಯನ್ನು ಪ್ರಯೋಗಿಸಿದೆವು. ನಂತರ ರೈತರು ರಾಷ್ಟ್ರೀಯ ಹೆದ್ದಾರಿಯನ್ನೂ ತಡೆದರು. 600 ಪ್ರತಿಭಟನಾಕಾರರಲ್ಲಿ 35 ಜನರನ್ನು ಬಂಧಿಸಲಾಗಿದೆ ಹಾಗೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು" ಎಂದು ಮೊಗಾದ ಪೊಲೀಸ್ ವರಿಷ್ಠಾಧಿಕಾರಿ ಧ್ರುಮಾನ್ ನಿಂಬಾಲೆ ಹೇಳಿದರು.
ಎಸ್ಎಡಿ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಇತ್ತೀಚೆಗೆ ಪಂಜಾಬ್ನ ನೂರು ವಿಧಾನಸಭಾ ಕ್ಷೇತ್ರಗಳಲ್ಲಿ 100 ದಿನಗಳ ಯಾತ್ರೆಯನ್ನು ಆರಂಭಿಸಿದ್ದರು.
“ರೈತರು ಒಂಬತ್ತು ತಿಂಗಳಿನಿಂದ ರಾಷ್ಟ್ರೀಯ ರಾಜಧಾನಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ರಾಜಕೀಯ ಪಕ್ಷಗಳು "ಅಧಿಕಾರದ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದು, ರೈತರಿಗಾಗಿ ಮೊಸಳೆ ಕಣ್ಣೀರು ಸುರಿಸುತ್ತಿವೆ" ಎಂದು ಪ್ರತಿಭಟನಾ ನಿರತ ರೈತರು ಹೇಳಿದರು.