ಮಾನಸಿಕ ಆರೋಗ್ಯ ಕೇಂದ್ರಗಳಲ್ಲಿ ಮಹಿಳೆಯರ ಹಕ್ಕುಗಳನ್ನು ಸಂರಕ್ಷಿಸಿ: ಸುಪ್ರೀಂ ಕೋರ್ಟ್
ಹೊಸದಿಲ್ಲಿ,ಸೆ.3: ಸರಕಾರ ನಡೆಸುತ್ತಿರುವ ಮಾನಸಿಕ ಆರೋಗ್ಯ ಕೇಂದ್ರಗಳಲ್ಲಿ ದಾಖಲಾಗಿರುವ ಮಹಿಳೆಯರ ಮಾನವಹಕ್ಕುಗಳ ಉಲ್ಲಂಘನೆಯಾಗುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸುಪ್ರೀಂಕೋರ್ಟ್ ವಿವಿಧ ರಾಜ್ಯ ಸರಕಾರಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮೂರು ತಿಂಗಳುಗಳ ಕಾಲಾವಕಾಶ ನೀಡಿದೆ.
2016ರಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಹಾಗೂ 2020ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ನಡೆಸಿದ ಅಧ್ಯಯನ ವರದಿಯನ್ನು ಆಧರಿಸಿ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ, ವಿಕ್ರಮ್ನಾಥ್ ಹಾಗೂ ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ. ಮಾನಸಿಕ ಆರೋಗ್ಯ ಕೇಂದ್ರಗಳಲ್ಲಿ ಸಾಂಸ್ಥಿಕ ಪಾಲನೆಯಲ್ಲಿರುವ ದೇಶದ ನೂರಾರು ಮಾನಸಿಕ ಅಸ್ವಸ್ಥ ಮಹಿಳೆಯರು ಅನುಭವಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ವರದಿಯಲ್ಲಿ ಗಮನಸೆಳೆಯಲಾಗಿದೆ.ಸಂವಿಧಾನವು ಖಾತರಿಪಡಿಸಿರುವಂತಹ ಘನತೆ ಹಾಗೂ ಖಾಸಗಿತನದಂತಹ ಮೂಲಭೂತ ಹಕ್ಕುಗಳು ಅವರಿಗೆ ಲಭ್ಯವಾಗುತ್ತಿಲ್ಲವೆಂದು ಅಧ್ಯಯನ ವರದಿ ಆತಂಕ ವ್ಯಕ್ತಪಡಿಸಿತ್ತು.
‘‘ಈ ಮಹಿಳೆಯರಿಗೆ ಮಾನಸಿಕ ಆರೋಗ್ಯ ಕೇಂದ್ರಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ನಿರಾಕರಿಸಲಾಗುತ್ತಿದೆ. ತಾಯಂದಿರಿಗೆ ಅವರ ಮಕ್ಕಳನ್ನು ಸಮೀಪದಲ್ಲಿ ಇಟ್ಟುಕೊಳ್ಳಲು ಅವಕಾಶ ನೀಡಲಾಗುತ್ತಿಲ್ಲ. ಹಲವಾರು ಸರಕಾರಿ ಮಾನಸಿಕ ಆರೋಗ್ಯ ಸಂಸ್ಥೆಗಳು ತಾಯಿ-ಮಗುವಿಗೆ ಪ್ರತ್ಯೇಕ ವಾರ್ಡ್ ಇರುವುದಿಲ್ಲವೆಂದು ನ್ಯಾಯಪೀಠವು ಗುರುವಾರ ಪ್ರಕಟಿಸಿದ 12 ಪುಟಗಳ ಆದೇಶದಲ್ಲಿ ತಿಳಿಸಿದೆ. ಅವರಿಗೆ ಖಾಸಗಿತನದ ಅವಕಾಶವಿಲ್ಲ ಅಷ್ಟೇ ಅಲ್ಲದೆ ಅವರ ತಲೆಯನ್ನು ವಿಕಾರವಾಗಿ ಬೋಳಿಸಲಾಗುತ್ತಿದೆ ಮತ್ತು ಅವರಿಗೆ ಆಧಾರ್ನಂತಹ ಯಾವುದೇ ದಾಖಲೆಪತ್ರಗಳ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡುತ್ತಿಲ್ಲ. ಅವರಿಗೆ ಭಿನ್ನಸಾಮರ್ಥ್ಯ ಪ್ರಮಾಣಪತ್ರಗಳನ್ನು ಅಥವಾ ಪಿಂಚಣಿಯನ್ನು ನೀಡಲಾಗುತ್ತಿಲ್ಲ’’ ಎಂದು ನ್ಯಾಯಪೀಠ ಆಸಮಾಧಾನ ವ್ಯಕ್ತಪಡಿಸಿದೆ. ನ್ಯಾಯವಾದಿ ಗೌರವ್ ಕುಮಾರ್ ಬನ್ಸಾಲ್ ಅವರು ಸಲ್ಲಿಸಿದ ಅರ್ಜಿಯೊಂದರಲ್ಲಿ ಸರಕಾರಿ ಮಾನಸಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುವ ಮಹಿಳೆಯರ ಯಾತನೆ ಹಾಗೂ ಈ ಅಧ್ಯಯನ ವರದಿಯ ಅಂಶಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಮಾನಸಿಕ ಅಸ್ವಸ್ಥ ವ್ಯಕ್ತಿಗಳಿಗಾಗಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ಆಗಿರುವ ಪ್ರಗತಿಯ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಸಿಕ ಸಭೆಗಳನ್ನು ನಡೆಸಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿತು. ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶದಂತಹ ರಾಜ್ಯಗಳಲ್ಲಿ ಮಾನಸಿಕ ಆರೋಗ್ಯ ಕೇಂದ್ರಗಳಲ್ಲಿ ಗುಣಮುಖರಾದ ರೋಗಿಗಳನ್ನು ಭಿಕ್ಷುಕ ಗೃಹಳಲ್ಲಿ ಕೂಡಿಹಾಕುತ್ತಿರುವುದನ್ನು ಆಘಾತಕಾರಿ ಸಂಗತಿಯ ಬಗ್ಗೆ ಅರ್ಜಿದಾರರು ಗಮನಸೆಳೆದಿದ್ದರು. ಅಸ್ತಿತ್ವದಲ್ಲಿರುವ ವೃದ್ಧಾಶ್ರಮ ಗಳನ್ನು ಹಾಗೂ ಹಾಸ್ಟೆಲ್ಗಳನ್ನು ಪುನರ್ವಸತಿ ಕೇಂದ್ರಗಳಾಗಿ ಪರಿವರ್ತಿಸುವ ಉತ್ತರಪ್ರದೇಶದ ನಡೆಯುವ ಕೇವಲ ಬಾಯಿಮಾತಿನಲ್ಲಷ್ಟೇ ಉಳಿದಿದೆ ಎಂದು ಸುಪ್ರೀಂಕೋರ್ಟ್ಅಭಿಪ್ರಾಯಿಸಿತ್ತು.