ನ್ಯಾಯಾಲಯಗಳಲ್ಲಿ ಭೌತಿಕ ವಿಚಾರಣೆಗಳ ಕುರಿತು ಸಿಜೆಐಗೆ ಬಾಲಕಿಯ ಪತ್ರಕ್ಕೆ ಮಣೆ ಹಾಕಿದ ಸುಪ್ರೀಂ
ಹೊಸದಿಲ್ಲಿ,ಸೆ.4: ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ)ಎನ್.ವಿ.ರಮಣ ಅವರಿಗೆ ಬಾಲಕಿಯೋರ್ವಳು ಬರೆದಿರುವ ಪತ್ರವು ನ್ಯಾಯಾಲಯಗಳಲ್ಲಿ ಸಂಪೂರ್ಣವಾಗಿ ಭೌತಿಕ ವಿಚಾರಣೆಗಳ ಪುನರಾರಂಭ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಳ್ಳಲು ಸರ್ವೋಚ್ಚ ನ್ಯಾಯಾಲಯವನ್ನು ಪ್ರೇರೇಪಿಸಿದೆ. ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಕಳೆದ ವರ್ಷ ನ್ಯಾಯಾಲಯಗಳಲ್ಲಿ ಭೌತಿಕ ವಿಚಾರಣೆಗಳನ್ನು ಸ್ಥಗಿತಗೊಳಿಸಲಾಗಿತ್ತು.
ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮುಖ್ಯ ನ್ಯಾಯಮೂರ್ತಿ ರಮಣ ಅವರನ್ನು ಸನ್ಮಾನಿಸಲು ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ವಿನೀತ ಸರನ್ ಅವರು,‘ಇತರ ಎಲ್ಲ ಸ್ಥಳಗಳು ತೆರೆದಿದ್ದರೂ,ಶಾಲೆಗಳೂ ಪುನರಾರಂಭಗೊಳ್ಳುತ್ತಿದ್ದರೂ ನ್ಯಾಯಾಲಯಗಳನ್ನೇಕೆ ಪುನರಾರಂಭಿಸಲಾಗಿಲ್ಲ ಎಂದು ಪ್ರಶ್ನಿಸಿ ಬಾಲಕಿಯೋರ್ವಳು ಸಿಜೆಐಗೆ ಪತ್ರ ಬರೆದಿದ್ದಾಳೆ ಎಂದು ಶುಕ್ರವಾರ ನನಗೆ ತಿಳಿದುಬಂದಿದೆ. ಬಾಲಕಿಯ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಲು ಮತ್ತು ವಿಚಾರಣೆ ನಡೆಸಲು ಸಿಜೆಐ ನಿರ್ಧರಿಸಿದ್ದಾರೆ ಎಂದು ನನಗೆ ಹೇಳಲಾಗಿದೆ ’ಎಂದು ತಿಳಿಸಿದರು.
ಇತ್ತೀಚಿಗೆ ಇಂತಹುದೇ ಘಟನೆಯಲ್ಲಿ ನ್ಯಾ.ರಮಣ ಅವರು ಕೇರಳದ ಐದನೇ ತರಗತಿ ವಿದ್ಯಾರ್ಥಿನಿ ಲಿಡ್ವಿನಾ ಜೋಸೆಫ್ ಬರೆದಿದ್ದ ಪತ್ರಕ್ಕೆ ಹೃದಯಸ್ಪರ್ಶಿಯಾಗಿ ಸ್ಪಂದಿಸಿದ್ದರು. ಕೊರೋನವೈರಸ್ ಎರಡನೇ ಅಲೆಯ ನಡುವೆ ಆಮ್ಲಜನಕ ಪೂರೈಕೆಗೆ ಸಂಬಂಧಿಸಿದಂತೆ ನ್ಯಾಯಾಲಯವು ಹೊರಡಿಸಿದ್ದ ಆದೇಶಕ್ಕಾಗಿ ಬಾಲಕಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಳು. ನ್ಯಾ.ರಮಣ ಅವರು ತನ್ನ ಸಹಿಯುಳ್ಳ ಸಂವಿಧಾನದ ಪ್ರತಿಯೊಂದನ್ನೂ ಬಾಲಕಿಗೆ ಕಳುಹಿಸಿದ್ದರು.
ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಸೆ.1ರಿಂದ ಭೌತಿಕ ವಿಚಾರಣೆಗಳನ್ನು ಪುನರಾರಂಭಿಸಿದೆ. ಆದರೆ ಮೂರನೇ ಅಲೆಯ ಎಚ್ಚರಿಕೆಯಿಂದಾಗಿ ವರ್ಚುವಲ್ ವಿಚಾರಣೆಗಳನ್ನೂ ಮುಂದುವರಿಸಿದೆ.