ಅಂಗ ರಕ್ಷಕ ಸಾವು: ಬಿಜೆಪಿ ನಾಯಕ ಸುವೇಂದು ಅಧಿಕಾರಿಗೆ ಸಿಐಡಿ ಸಮನ್ಸ್
ಕೋಲ್ಕತಾ ಸೆ. 5: ಅಂಗ ರಕ್ಷಕ ಸಾವನ್ನಪ್ಪಿರುವ ಪ್ರಕರಣದ ತನಿಖೆಗೆ ಸಂಬಂಧಿಸಿ ಪಶ್ಚಿಮಬಂಗಾಳ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿಗೆ ಪಶ್ಚಿಮಬಂಗಾಳ ಸಿಐಡಿ ಸಮನ್ಸ್ ನೀಡಿದೆ ಎಂದು ಹಿರಿಯ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಭವಾನಿ ಭವನದಲ್ಲಿರುವ ಸಿಐಡಿಯ ಕೇಂದ್ರ ಕಚೇರಿಯಲ್ಲಿ ಸೋಮವಾರ ತನಿಖಾಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ನಂದಿಗ್ರಾಮದ ಬಿಜೆಪಿ ಶಾಸಕ ಸುವೇಂದು ಅಧಿಕಾರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸುವೇಂದು ಅಧಿಕಾರಿ ಅಂಗ ರಕ್ಷಕ ಸುಭಬ್ರತ್ ಚಕ್ರವರ್ತಿ ತನ್ನ ಸೇವಾ ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲು ಸಿಐಡಿ ತಂಡವೊಂದನ್ನು ರೂಪಿಸಲಾಗಿತ್ತು.
ತನ್ನ ಪತಿಯ ಹತ್ಯೆಯ ಕುರಿತು ತನಿಖೆ ನಡೆಸುವಂತೆ ಕೋರಿ ಚಕ್ರವರ್ತಿಯ ಪತ್ನಿ ಕೊಂಟಾಯಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆಯ ಭಾಗವಾಗಿ ಸಿಐಡಿ ಇದುವರೆ 11 ಮಂದಿ ಪೊಲೀಸರು ಸೇರಿದಂತೆ 15 ಮಂದಿಯ ವಿಚಾರಣೆ ನಡೆಸಿದೆ. ಈ ಹಿಂದೆ ತಂಡದ ಸದಸ್ಯರು ಅಧಿಕಾರಿ ಅವರ ಪುರ್ಬಾ ಮೇಧಿನಿಪುರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿಪರಿಶೀಲನೆ ನಡೆಸಿತ್ತು.