ಆರು ರಾಜ್ಯಸಭಾ ಸ್ಥಾನಗಳಿಗೆ ಉಪಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ
ಅಕ್ಟೋಬರ್ 4 ರಂದು ಮತದಾನ
ಹೊಸದಿಲ್ಲಿ: ತಮಿಳುನಾಡಿನ ಎರಡು, ಪಶ್ಚಿಮ ಬಂಗಾಳ, ಅಸ್ಸಾಂ, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಲ್ಲಿ ತಲಾ ಒಂದು ಸ್ಥಾನ ಸೇರಿದಂತೆ ಆರು ರಾಜ್ಯಸಭಾ ಸ್ಥಾನಗಳಿಗೆ ಉಪಚುನಾವಣೆಯನ್ನು ಚುನಾವಣಾ ಆಯೋಗವು ಗುರುವಾರ ಪ್ರಕಟಿಸಿದೆ.
ಈ ಎಲ್ಲ ಸ್ಥಾನಗಳಿಗೆ ಅಕ್ಟೋಬರ್ 4 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಎಐಎಡಿಎಂಕೆ ನಾಯಕರಾದ ಕೆ.ಪಿ .ಮುನುಸ್ವಾಮಿ ಮತ್ತು ಆರ್ .ವೈತಿಲಿಂಗಂ ಅವರ ರಾಜೀನಾಮೆಯಿಂದಾಗಿ ತಮಿಳುನಾಡಿನ ಎರಡು ರಾಜ್ಯಸಭಾ ಸ್ಥಾನಗಳು ಖಾಲಿಯಾಗಿವೆ. ಈ ಇಬ್ಬರು ಈಗ ರಾಜ್ಯ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಟಿಎಂಸಿ ನಾಯಕ ಮತ್ತು ಸಂಪುಟ ಮಂತ್ರಿ ಮಾನಸ್ ರಂಜನ್ ಭುನಿಯಾ ರಾಜೀನಾಮೆ ನೀಡಿದ ನಂತರ ಪಶ್ಚಿಮ ಬಂಗಾಳ ರಾಜ್ಯಸಭಾ ಸ್ಥಾನ ತೆರವಾಗಿತ್ತು.
ಅಸ್ಸಾಂನಲ್ಲಿ ಬಿಸ್ವಜಿತ್ ದೈಮರಿ ರಾಜ್ಯಸಭಾ ಸದಸ್ಯತ್ವ ಹಾಗೂ ತನ್ನ ಹಿಂದಿನ ಪಕ್ಷವಾದ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ ನಂತರ ರಾಜ್ಯಸಭಾ ಸ್ಥಾನವು ಖಾಲಿಯಾಯಿತು.
ಹಾಲಿ ಸಂಸದ ಎನ್. ಗೋಕುಲಕೃಷ್ಣನ್ ಅವರ ನಿವೃತ್ತಿಯಿಂದಾಗಿ ಖಾಲಿಯಾಗಿರುವ ಪುದುಚೇರಿಯ ರಾಜ್ಯಸಭಾ ಸ್ಥಾನಕ್ಕೆ ದ್ವೈವಾರ್ಷಿಕ ಚುನಾವಣೆಯೂ ಅಕ್ಟೋಬರ್ 4 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.