ಮುಂದಿನ ಚುನಾವಣೆಗೆ ಸಿಧು ನೇತೃತ್ವವಹಿಸಲಿದ್ದಾರೆಂಬ ರಾವತ್ ಹೇಳಿಕೆ ಗೊಂದಲಕಾರಿ: ಸುನೀಲ್ ಜಾಖರ್
photo: Facebook
ಹೊಸದಿಲ್ಲಿ: ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಸುನೀಲ್ ಜಾಖರ್ ಅವರು ಇಂದು ಬೆಳಿಗ್ಗೆ ಪಕ್ಷದ ರಾಜ್ಯ ಉಸ್ತುವಾರಿ ಹರೀಶ್ ರಾವತ್ ವಿರುದ್ಧ ವಾಗ್ದಾಳಿ ನಡೆಸಿದರು. ಚರಣ್ ಜೀತ್ ಸಿಂಗ್ ಚನ್ನಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಕೆಲವೇ ಗಂಟೆಗಳ ಮೊದಲು ನವಜೋತ್ ಸಿಂಗ್ ಸಿಧು ಬೆಂಬಲಿಸಿ ರಾವತ್ ನೀಡಿರುವ ಹೇಳಿಕೆಯನ್ನು ಪ್ರಶ್ನಿಸಿದರು.
ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಸಿಧು ನಾಯಕತ್ವದಲ್ಲೇ ಎದುರಿಸಲಾಗುವುದು ಎಂದು ರಾವತ್ ಹೇಳಿಕೆ ನೀಡಿದ್ದರು.
"ಚರಣ್ ಜೀತ್ ಚನ್ನಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲೇ ಸಿಧು ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ "ಎಂದು ರಾವತ್ ನೀಡಿದ ಹೇಳಿಕೆ ಗೊಂದಲಕ್ಕೀಡು ಮಾಡಿದೆ. ಇದು ಮುಖ್ಯಮಂತ್ರಿಯ (ನಿಯೋಜಿತ) ಅಧಿಕಾರವನ್ನು ದುರ್ಬಲಗೊಳಿಸುವ ಸಾಧ್ಯತೆಯಿದೆ’’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ರವಿವಾರ ಪಕ್ಷದ ಶಾಸಕಾಂಗ ಪಕ್ಷದ ಹೊಸ ನಾಯಕನಾಗಿ ಚನ್ನಿಯವರನ್ನು ಘೋಷಿಸಿದ ನಂತರ ಸುದ್ದಿಸಂಸ್ಥೆ ANI ನೊಂದಿಗೆ ಮಾತನಾಡಿದ ರಾವತ್ ಮುಂದಿನ ವರ್ಷ ಚುನಾವಣೆಯು ಪ್ರಸ್ತುತ ರಾಜ್ಯ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾಗಿರುವ ಸಿಧು ಅವರ ನೇತೃತ್ವದಲ್ಲಿ ನಡೆಯಲಿದೆ. ಮಾಜಿ ಕ್ರಿಕೆಟಿಗ 'ಅತ್ಯಂತ ಜನಪ್ರಿಯ' ನಾಯಕ ಎಂದು ಕರೆದಿದ್ದರು.