ವಿಧಾನಸಭಾ ಚುನಾವಣೆಗೆ ಮುನ್ನ ಸಂಪುಟ ವಿಸ್ತರಣೆ ಮಾಡಿದ ಆದಿತ್ಯನಾಥ್: ವರದಿ
ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರವಿವಾರ ಸಂಜೆ ಸಂಪುಟ ವಿಸ್ತರಣೆ ಮಾಡಿದ್ದಾರೆ ಎಂದು ವರದಿಯಾಗಿದೆ. ನೂತನ ಸಂಪುಟದಲ್ಲಿ ಮಾಜಿ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ ಅವರನ್ನೂ ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಪುಟ ವಿಸ್ತರಣೆ ನಡೆಸಲಾಗಿದ್ದು, ಇದುವರೆಗೂ ಕಡೆಗಣಿಸಲ್ಪಟ್ಟಿದ್ದ ಕೆಲ ಸಮುದಾಯಗಳ ನಾಯಕರಿಗೆ ಅವರಲ್ಲಿರುವ ವೋಟ್ ಬ್ಯಾಂಕ್ ಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಾನ ನೀಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಬ್ರಾಹ್ಮಣರು ಉತ್ತರಪ್ರದೇಶದಲ್ಲಿ ಶೇ.13ರಷ್ಟಿದ್ದು, ಅಲ್ಲಿನ ಪ್ರಭಾವಶಾಲಿ ಸಮುದಾಯವೂ ಆಗಿದೆ. ಜಿತಿನ್ ಪ್ರಸಾದಗೆ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ಕಡೆಗಿದ್ದ ಮತ ಬ್ಯಾಂಕ್ ಗಳನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ವರದಿ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, "ಇದು ಒಂದು ನಾಟಕವಷ್ಟೇ, ಮುಂದಿನ ಚುನಾವಣೆಗಿರುವ ಪೊಳ್ಳು ಪ್ರಯತ್ನ. ನಾಲ್ಕೂವರೆ ವರ್ಷಗಳ ಕಾಲ ಅವರನ್ನು ಕಡೆಗಣಿಸಿ ಈಗ ಸುಮ್ಮನೇ ಅವರನ್ನು ಆಯ್ಕೆ ಮಾಡಲಾಗಿದೆ. ಅವರು ತಮ್ಮ ಹೆಸರನ್ನು ನಾಮಫಲಕದಲ್ಲಿ ಮುದ್ರಿಸುವ ವೇಳೆಗಾಗಲೇ ಚುನಾವಣಾ ನೀತಿ ಸಂಹಿತಿ ಜಾರಿಯಾಗಲಿದೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.