ಬಿಜೆಪಿ ಸೇರುತ್ತೇನೆಂಬ ಊಹಾಪೋಹಕ್ಕೆ ಉತ್ತರಿಸಿದ ಅಮರಿಂದರ್ ಸಿಂಗ್
"ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿದ್ದೇನೆ, ಅವಮಾನವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ"
ಹೊಸದಿಲ್ಲಿ: ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಬುಧವಾರ ಸಂಜೆ ಭೇಟಿಯಾಗಿ ದೀರ್ಘಕಾಲ ಚರ್ಚಿಸಿರುವ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಶೀಘ್ರವೇ ಬಿಜೆಪಿಗೆ ಸೇರಲಿದ್ದಾರೆಂಬ ಊಹಾಪೋಹಕ್ಕೆ ಪುಷ್ಟಿ ಲಭಿಸಿತ್ತು.
ಈ ಕುರಿತು NDTV ಜೊತೆಗೆ ಮಾತನಾಡಿದ ಅಮರಿಂದರ್ ಸಿಂಗ್, "ನಾನು ಬಿಜೆಪಿಗೆ ಸೇರುವುದಿಲ್ಲ.ಆದರೆ ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿದ್ದೇನೆ. ಅವಮಾನವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ'' ಎಂದು ಹೇಳಿದ್ದಾರೆ.
"ಇಲ್ಲಿಯವರೆಗೆ ನಾನು ಕಾಂಗ್ರೆಸ್ನಲ್ಲಿದ್ದೇನೆ. ಆದರೆ ನಾನು ಕಾಂಗ್ರೆಸ್ನಲ್ಲಿ ಉಳಿಯುವುದಿಲ್ಲ. ನನ್ನನ್ನು ಪಕ್ಷದಲ್ಲಿ ಉಳಿದುಕೊಳ್ಳುವ ರೀತಿ ನಡೆಸಿಕೊಂಡಿಲ್ಲ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಒಂದು ದಿನದ ನಂತರ ಕ್ಯಾಪ್ಟನ್ NDTVಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದರು.
ಹಿರಿಯ ಕಾಂಗ್ರೆಸ್ ನಾಯಕರಾದ ಅಂಬಿಕಾ ಸೋನಿ ಹಾಗೂ ಕಮಲ್ ನಾಥ್ ಅಮರಿಂದರ್ ಸಿಂಗ್ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಮಂಗಳವಾರದಿಂದ ದಿಲ್ಲಿಯಲ್ಲಿದ್ದ ಕ್ಯಾಪ್ಟನ್ ತನ್ನ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿಲ್ಲ. ಏಕೆಂದರೆ ಸಿಂಗ್ ಅವರು ಅಮಿತ್ ಶಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಜೊತೆ ತಮ್ಮ ಭೇಟಿಯನ್ನು ಮುಂದುವರಿಸಿದ್ದಾರೆ.