ಕೋರ್ಟ್ ನಲ್ಲಿ ಕೃಷಿ ಕಾನೂನನ್ನು ಪ್ರಶ್ನಿಸಿದ ಬಳಿಕವೂ ರೈತರು ಪ್ರತಿಭಟನೆ ನಡೆಸುತ್ತಿರುವುದೇಕೆ?: ಸುಪ್ರೀಂಕೋರ್ಟ್
ಹೊಸದಿಲ್ಲಿ, ಅ.4: ಕೇಂದ್ರ ಸರಕಾರದ ಮೂರು ನೂತನ ಕೃಷಿ ಕಾಯ್ದೆಗಳಿಗೆ ಈಗಾಗಲೇ ತಡೆಯಾಜ್ಞೆ ನೀಡಲಾಗಿದೆ. ಈ ಕಾಯ್ದೆಗಳು ಜಾರಿಯಲ್ಲಿ ಇಲ್ಲದಿರುವಾಗ ಅವುಗಳ ವಿರುದ್ಧ ಯಾಕೆ ಪ್ರತಿಭಟನೆ ನಡೆಸಬೇಕೆಂದು ಸುಪ್ರೀಂಕೋರ್ಟ್ ಸೋಮವಾರ ಪ್ತತಿಭಟನಾ ನಿರತ ರೈತ ಸಂಘಟನೆಗಳನ್ನು ಪ್ರಶ್ನಿಸಿದೆ.
ಕೃಷಿ ಕಾಯ್ದೆಗಳ ಸಿಂಧುತ್ವವನ್ನು ಪ್ರಶ್ನಿಸಿ ಸಂಘಟನೆಯೊಂದು ಈಗಾಗಲೇ ನ್ಯಾಯಾಲಯದ ಮೆಟ್ಟಲೇರಿದೆ. ಹೀಗಿರುವಾಗ ಈ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುವ ಪ್ರಶ್ನೆ ಉದ್ಭವಿಸುವುದಾದರೂ ಯಾಕೆ ಎಂದು ನ್ಯಾಯಮೂರ್ತಿಗಳದಾ ಎ.ಎಂ. ಖ್ನಾವಿಲ್ಕರ್ ಹಾಗೂ ಸಿ.ಟಿ. ರವಿಕಮಾರ್ ಅವರನ್ನೊಳಗೊಂಡ ಪೀಠ ಪ್ರಶ್ನಿಸಿದೆ.
ರವಿವಾರ ಲಖೀಂಪುರದಲ್ಲಿ ನಡೆದ ಹಿಂಸಾತ್ಮಕ ಘಟನೆಯಲ್ಲಿ 9ಮಂದಿ ಮೃತಪಟ್ಟ ಘಟನೆಯನ್ನು ಕೇಂದ್ರ ಸರಕಾರದ ಅಟಾರ್ನಿ ಜನರಲ್ ಕೆ.ವಿ. ವೇಣುಗೋಪಾಲ್ ಸುಪ್ರೀಂ ನ್ಯಾಯಪೀಠದ ಮುಂದೆ ಪ್ರಸ್ತಾವಿಸಿದ್ದರು. ಇಂತಹ ಘಟನೆಗಳು ನಡೆದಾಗ ಯಾರೂ ಕೂಡಾ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲವೆಂದು ಅದು ತಿಳಿಸಿತು. ಒಮ್ಮೆ ಈ ವಿಷಯವು ಸರ್ವೋಚ್ಚ ನ್ಯಾಯಾಲಯದ ಮುಂದೆ ಬಂದ ಬಳಿಕ ಯಾರೂ ಕೂಡಾ ಅದರ ಕುರಿತು ರಸ್ತೆಗಿಳಿದು ಹೋರಾಟ ನಡೆಲು ಸಾಧ್ಯವಿಲ್ಲ ಎಂದು ಸಾಲಿಸಿಟಿರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಪೀಠಕ್ಕೆ ತಿಳಿಸಿದರು.
ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಸುಮಾರು 200ರಷ್ಟು ರೈತರು ಅಥವಾ ಪ್ರತಿಭಟನಕಾರರು ದಿಲ್ಲಿಯ ಜಂತರ್ಮಂತರ್ನಲ್ಲಿ ಶಾಂತಿಯುತ ಹಾಗೂ ಅಹಿಂಸಾತ್ಮಕ ಸತ್ಯಾಗ್ರಹ ನಡೆಸಲು ನಡೆಸುವುದಕ್ಕೆ ಅನುಮತಿ ನೀಡುವಂತೆ ಆಡಳಿತಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಕಿಸಾನ್ ಮಹಾಪಂಚಾಯತ್ ಸಂಘಟನೆ ಸಲ್ಲಿಸಿದ್ದ ಅರ್ಜಿಯ ಆಲಿಕೆಯ ವೇಳೆ ಸರ್ವೋಚ್ಚ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಕರಣದ ವಿಚಾರಣೆಯನ್ನು ನ್ಯಾಯಪೀಠವು ಅಕ್ಟೋಬರ್ 21ಕ್ಕೆ ಮುಂದೂಡಿದೆ. ಈ ಮೂರು ಕೃಷಿ ಕಾನೂನುಗಳ ಸಿಂಧುತ್ವದ ಪ್ರಶ್ನಿಸಿ ರೈತರ ಸಂಘಟನೆಯೊಂದು ರಾಜಸ್ತಾನದ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ದಾವೆಯನ್ನು ಕೂಡಾ ನ್ಯಾಯಪೀಠವು ತನಗೆ ವರ್ಗಾಯಿಸಿಕೊಂಡಿದೆ.