ಸಿಂಘು ಗಡಿಯಲ್ಲಿ ಯುವಕನ ಹತ್ಯೆ ಪ್ರಕರಣ: ಎಲ್ಲ ಮೂವರು ಆರೋಪಿಗಳಿಗೆ 6 ದಿನಗಳ ಪೊಲೀಸ್ ಕಸ್ಟಡಿ
ಹೊಸದಿಲ್ಲಿ, ಅ. 17: ಸಿಂಘು ಗಡಿಯಲ್ಲಿ ದಲಿತ ಯುವಕನ ಹತ್ಯೆ ಪ್ರಕರಣದ ಎಲ್ಲ ಮೂವರು ಆರೋಪಿಗಳಾದ ನಾರಾಯಣ ಸಿಂಗ್, ಭಗವಂತ್ ಸಿಂಗ್ ಹಾಗೂ ಗೋವಿಂದ ಪ್ರೀತ್ ಸಿಂಗ್ರನ್ನು ನ್ಯಾಯಾಲಯ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಈ ಮೂವರು ಆರೋಪಿಗಳನ್ನು ಇಂದು ಬೆಳಗ್ಗೆ ಸೋನಿಪತ್ ನ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಯಲ್ಲಿ ತರಣ್ತರಣ್ನ 35 ವರ್ಷದ ದಲಿತ ಯುವಕ ಲಖ್ಬೀರ್ ಸಿಂಗ್ ಅವರ ಹತ್ಯೆ ನಡೆಸಲಾಗಿತ್ತು. ಅಲ್ಲದೆ, ಅವರ ಮೃತದೇಹ ಪೊಲೀಸ್ ಬ್ಯಾರಿಕೇಡ್ ಗೆ ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಸಂಜೆ ಅಮರ್ಕೋಟ್ ಗ್ರಾಮದ ನಿವಾಸಿ ನಿಹಾಂಗ್ ನಾರಾಯಣ ಸಿಂಗ್ ಅವರು ಅಮೃತಸರ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರ ಮುಂದೆ ಶರಣಾಗತರಾಗಿದ್ದರು. ಅನಂತರ ಅವರನ್ನು ಬಂಧಿಸಲಾಗಿತ್ತು. ತರುವಾಯ ಮತ್ತಿಬ್ಬರು ನಿಹಾಂಗರನ್ನು ಹರ್ಯಾಣ ಪೊಲೀಸರು ಬಂಧಿಸಿದ್ದರು.
ಪ್ರಕರಣದ ಇನ್ನೋರ್ವ ಆರೋಪಿ ಸರ್ವಜೀತ್ ಸಿಂಗ್ ಅವರನ್ನು ಪೊಲೀಸರು ಸೋನಿಪತ್ ನ ಕುಂಡ್ಲಿ ಗ್ರಾಮದಲ್ಲಿ ಶುಕ್ರವಾರ ಸಂಜೆ ವಶಕ್ಕೆ ತೆಗೆದುಕೊಂಡಿದ್ದರು.
ಮೂವರನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಸಿಕ್ಖರ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸಿದ್ದಾನೆ ಎಂದು ಆರೋಪಿಸಿ ರೈತ ಲಖ್ಬೀರ್ ಸಿಂಗ್ ಅವರನ್ನು ಹತ್ಯೆಗೈಯಲಾಗಿದೆ ಎಂದು ಆರೋಪಿಗಳು ತಿಳಿಸಿದ್ದಾರೆ.