ಉತ್ತರ ಪ್ರದೇಶ ಚುನಾವಣೆ:ಸಮಾಜವಾದಿ ಪಕ್ಷದೊಂದಿಗೆ ಓಂ ಪ್ರಕಾಶ್ ರಾಜ್ಭರ್ ನೇತೃತ್ವದ ಪಕ್ಷ ಮೈತ್ರಿ
photo: twitter
ಲಕ್ನೊ: ಉತ್ತರ ಪ್ರದೇಶದಲ್ಲಿ ರಾಜಕೀಯ ಶಕ್ತಿಗಳ ಮರುಜೋಡಣೆ ಈಗ ಶರವೇಗದಲ್ಲಿ ನಡೆಯುತ್ತಿದೆ. ಯೋಗಿ ಆದಿತ್ಯನಾಥ್ ಸರಕಾರದ ಮಾಜಿ ಸಚಿವ ಹಾಗೂ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ (ಎಸ್ಬಿಎಸ್ಪಿ) ಮುಖ್ಯಸ್ಥ ಓಂ ಪ್ರಕಾಶ್ ರಾಜ್ಭರ್ 2022 ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು ಬುಧವಾರ ನಿರ್ಧರಿಸಿದ್ದಾರೆ.
ಎಸ್ಬಿಎಸ್ಪಿಯ ಮುಖ್ಯ ಪ್ರಧಾನ ಕಾರ್ಯದರ್ಶಿ ಅರವಿಂದ್ ರಾಜಭರ್ ಅವರೊಂದಿಗೆ ರಾಜ್ಭರ್ ಅವರು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಲಕ್ನೋದಲ್ಲಿ ಭೇಟಿ ಮಾಡಿದರು. ಭಾರತೀಯ ಜನತಾ ಪಕ್ಷದ ಸೋಲನ್ನು ಖಚಿತಪಡಿಸಿಕೊಳ್ಳಲು ಈಗ ಎಸ್ಬಿಎಸ್ಪಿ ಮತ್ತು ಸಮಾಜವಾದಿ ಪಕ್ಷಗಳು ಒಟ್ಟಾಗಿ ಹೋಗಲಿವೆ ಎಂದು ಹೇಳಿದರು.
“ಈ ಬಾರಿ ಬಿಜೆಪಿ ನಾಶವಾಗುತ್ತದೆ. ಸಮಾಜವಾದಿ ಪಕ್ಷ ಹಾಗೂ ಸುಹೇಲ್ದೇವ್ ಭಾರತೀಯ ಸಮಾಜ ಪಾರ್ಟಿ ಒಂದಾಗಿವೆ. ದಲಿತರು, ಹಿಂದುಳಿದ ಅಲ್ಪಸಂಖ್ಯಾತರ ಸಹಿತ ಎಲ್ಲ ವರ್ಗಗಳಿಗೂ ದ್ರೋಹ ಮಾಡಿದ ಬಿಜೆಪಿ ಸರಕಾರದ ದಿನಗಣನೆ ಆರಂಭವಾಗಿದೆ'' ಎಂದು ಅಖಿಲೇಶ್ ಯಾದವ್ ಅವರನ್ನು ಭೇಟಿಯಾದ ನಂತರ ರಾಜ್ಭರ್ ಅವರು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.