ಲಂಚ ಪ್ರಕರಣದ ಗೋಸಾವಿ ಜತೆಗೆ ಎನ್ಸಿಬಿ ಅಧಿಕಾರಿ ಸಮೀರ್ ವಾಂಖಡೆ ಇರುವ ಫೋಟೊ ಬಿಡುಗಡೆ
Photo: NDTV
ಹೊಸದಿಲ್ಲಿ: ಆರ್ಯನ್ ಖಾನ್ `ಡ್ರಗ್ಸ್' ಪ್ರಕರಣ ದಿನೇದಿನೇ ಹೊಸ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೇಡೆ ಅವರಿಗೆ ರೂ. 8 ಕೋಟಿ ಸಂದಾಯವಾಗಲಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಸ್ವತಂತ್ರ ಸಾಕ್ಷಿ ಪ್ರಭಾಕರ್ ಸೈಲ್ ಎಂಬವರು ಮಾಡಿದ ಬೆನ್ನಲ್ಲೇ ಕೆಲ ಫೋಟೊಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ndtv.com ವರದಿ ಮಾಡಿದೆ.
ಕ್ರೂಸ್ ಹಡಗಿನ ಮೇಲೆ ದಾಳಿ ನಡೆದ ದಿನದಂದೇ ಎನ್ಸಿಬಿ ಕಚೇರಿಯಲ್ಲಿ ತೆಗೆಯಲಾದ ಫೋಟೋದಲ್ಲಿ ಮನೀಶ್ ವಾಂಖೇಡೆ ಅವರು ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಇದೆ ಎಂಬ ಮಾಹಿತಿ ನೀಡಿದ್ದಾರೆನ್ನಲಾದ ಬಿಜೆಪಿ ಕಾರ್ಯಕರ್ತ ಮನೀಶ್ ಭಾನುಶಾಲಿ ಜೊತೆ ಇರುವುದು ಕಾಣಿಸುತ್ತದೆ. ಖಾಸಗಿ ತನಿಖಾಕಾರ ಹಾಗೂ ಆರ್ಯನ್ ಜತೆ ವೈರಲ್ ಸೆಲ್ಫೀಯಲ್ಲಿ ಕಾಣಿಸಿಕೊಂಡಿದ್ದ ಕೆ ಪಿ ಗೋಸಾವಿ ಕೂಡ ವಾಂಖೇಡೆ ಜತೆಗಿರುವ ಫೋಟೋ ಹರಿದಾಡುತ್ತಿದೆ.
Photo: NDTV
ನಾಗರಿಕ ಮಾಹಿತಿದಾರ ಹಾಗೂ ಖಾಸಗಿ ತನಿಖಾಕಾರರೊಬ್ಬರು ಈ ಎನ್ಸಿಬಿ ದಾಳಿಯಲ್ಲಿ ಹೇಗೆ ಮತ್ತು ಏಕೆ ಪಾಲ್ಗೊಂಡಿದ್ದರೆಂಬ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ. ಈ ಪ್ರಕರಣ ಸಂಬಂಧ ಈಗಾಗಲೇ ಹಲವಾರು ಸ್ಫೋಟಕ ಮಾಹಿತಿಗಳನ್ನು ಹೊರಗೆಡಹಿರುವ ಮಹಾರಾಷ್ಟ್ರ ಸಚಿವ ಹಾಗೂ ಎನ್ಸಿಪಿ ನಾಯಕ ನವಾಬ್ ಮಲಿಕ್ ಮಂಗಳವಾರ ಮತ್ತೊಂದು ಆರೋಪ ಹೊರಿಸಿ ಸಮೀರ್ ವಾಂಖೇಡೆ ಅವರು 26 ಪ್ರಕರಣಗಳಲ್ಲಿ ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸಿಲ್ಲ ಎಂದು ಆರೋಪಿಸಿದ್ದಾರೆ.
ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಗೋಸಾವಿ ಸದ್ಯ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.