ಆರ್ಯನ್ ಖಾನ್ ಜಾಮೀನಿಗೆ 14 ಷರತ್ತುಗಳನ್ನು ವಿಧಿಸಿದ ನ್ಯಾಯಾಲಯ
ಮುಂಬೈ:ಡ್ರಗ್ಸ್ ಪ್ರಕರಣದಲ್ಲಿ ಕೊನೆಗೂ ಜಾಮೀನು ಪಡೆದಿರುವ ಆರ್ಯನ್ ಖಾನ್ ಪೊಲೀಸರಿಗೆ ಮಾಹಿತಿ ನೀಡದೆ ಮುಂಬೈನಿಂದ ಹೊರಹೋಗುವಂತಿಲ್ಲ ಹಾಗೂ ಪ್ರತಿ ಶುಕ್ರವಾರ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಮುಂದೆ ಹಾಜರಾಗಬೇಕು ಎಂದು ನ್ಯಾಯಾಲಯದ ಆದೇಶವು ಇಂದು ತಿಳಿಸಿದ್ದು, ನ್ಯಾಯಾಲಯವು ತಾನು ನೀಡಿರುವ ಜಾಮೀನಿಗೆ 14 ಷರತ್ತುಗಳನ್ನು ಪಟ್ಟಿ ಮಾಡಿದೆ.
ಶಾರುಖ್ ಖಾನ್ ಅವರ 23 ವರ್ಷದ ಪುತ್ರ ಆರ್ಯನ್ ಖಾನ್ ನಿನ್ನೆ ಬಾಂಬೆ ಹೈಕೋರ್ಟ್ ನಿಂದ ಜಾಮೀನು ಪಡೆದಿದ್ದು, ಇಂದು ಸಂಜೆ ಜೈಲಿನಿಂದ ಹೊರಬರುವ ಸಾಧ್ಯತೆ ಇದೆ.
ಆದೇಶದ ಪ್ರಕಾರ ಆರ್ಯನ್ ಖಾನ್ ಅವರು ರೂ. 1 ಲಕ್ಷದ ವೈಯಕ್ತಿಕ ಬಾಂಡ್ ಅನ್ನು ಸಲ್ಲಿಸಬೇಕು ಹಾಗೂ ಅವರ ಪಾಸ್ಪೋರ್ಟ್ ಅನ್ನು ಒಪ್ಪಿಸಬೇಕು.
ಅನುಮತಿಯಿಲ್ಲದೆ ದೇಶವನ್ನು ತೊರೆಯಬಾರದು. "ಇದೇ ರೀತಿಯ ಚಟುವಟಿಕೆಗಳಲ್ಲಿ ತೊಡಗಬಾರದು. ಸ್ನೇಹಿತ ಅರ್ಬಾಝ್ ಮರ್ಚೆಂಟ್ನಂತಹ ಇತರ ಆರೋಪಿಗಳೊಂದಿಗೆ ಸಂವಹನ ಮಾಡಬಾರದು ಹಾಗೂ ಮಾಧ್ಯಮಗಳೊಂದಿಗೆ ಮಾತನಾಡಬಾರದು" ಎಂಬ ಷರತ್ತುಗಳು ಸೇರಿವೆ.
ಆರ್ಯನ್ ಖಾನ್ ಪ್ರತಿ ಶುಕ್ರವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರ ನಡುವೆ ಎನ್ಸಿಬಿ ಕಚೇರಿಗೆ ಹೋಗಬೇಕು. ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು ಮತ್ತು ಅಗತ್ಯವಿದ್ದಾಗ ತನಿಖೆಗೆ ಸೇರಬೇಕು.
ಇವುಗಳಲ್ಲಿ ಯಾವುದಾದರೂ ಷರತ್ತುಗಳನ್ನು ಉಲ್ಲಂಘಿಸಿದರೆ, ಎನ್ಸಿಬಿ ಜಾಮೀನು ರದ್ದುಗೊಳಿಸುವಂತೆ ಕೋರಬಹುದು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.