ಕಂಗನಾ ಹೇಳಿಕೆ ‘ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ಅವಮಾನ’:ದಿಲ್ಲಿ ಬಿಜೆಪಿ ವಕ್ತಾರ ಆಕ್ರೋಶ
photo: Indian express
ಹೊಸದಿಲ್ಲಿ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ಅವಮಾನ ಮಾಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದಿಲ್ಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಒತ್ತಾಯಿಸಿದ್ದಾರೆ.
ರಣಾವತ್ ಅವರ ವಿವಾದಿತ ಹೇಳಿಕೆ ಇರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಈ ವೀಡಿಯೊದಲ್ಲಿ ಆಕೆ, 1947 ರಲ್ಲಿ ಭಾರತಕ್ಕೆ ಸಿಕ್ಕಿದ್ದು ‘ಭಿಕ್ಷೆ’. ಅದು ಸ್ವಾತಂತ್ರ್ಯವಲ್ಲ, ನಿಜವಾದ ಸ್ವಾತಂತ್ರ್ಯವು 2014 ರಲ್ಲಿ ಬಂದಿತ್ತು ಎಂದು ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ವರ್ಷವನ್ನು ಉಲ್ಲೇಖಿಸಿದ್ದಾರೆ.
“ಸ್ವಾತಂತ್ರ್ಯ ಹೋರಾಟಗಾರರ ಮಗ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದಿರುವ ನನಗೆ ಕಂಗನಾ ರಣಾವತ್ ನೀಡಿರುವ ಭಾರತಕ್ಕೆ ಸ್ವಾತಂತ್ರ್ಯವನ್ನು ಭಿಕ್ಷೆ ನೀಡಲಾಯಿತು ಎಂಬ ಹೇಳಿಕೆಯು ವಾಕ್ ಸ್ವಾತಂತ್ರ್ಯದ ಅತಿದೊಡ್ಡ ದುರುಪಯೋಗ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ಮಾಡಿರುವ ಅವಮಾನವಾಗಿದೆ”ಎಂದು ಹಿಂದಿಯಲ್ಲಿ ಕಪೂರ್ ಟ್ವೀಟ್ ಮಾಡಿದ್ದಾರೆ.
ಈ ಹೇಳಿಕೆಯು ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬವು ನೋಯಿಸುತ್ತದೆ ಹಾಗೂ ಇದು ವಾಕ್ ಸ್ವಾತಂತ್ರ್ಯದ ಅತಿದೊಡ್ಡ ದುರುಪಯೋಗವಾಗಿದೆ. ಭಾರತದ ನ್ಯಾಯಾಂಗ ವ್ಯವಸ್ಥೆ ಇದನ್ನು ಗಮನಿಸಬೇಕು. ರಣಾವತ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಅವರು ಹೇಳಿದರು.
ಈ ಹಿಂದೆ ಬಿಜೆಪಿ ಸಂಸದ ವರುಣ್ ಗಾಂಧಿ ಕೂಡ ರಣಾವತ್ ಹೇಳಿಕೆ ವಿರುದ್ಧ ತೀವ್ರವಾಗಿ ಹರಿಹಾಯ್ದಿದ್ದರು.