ಪ್ರಧಾನಿ ಮೋದಿ ಪಾಠ ಕಲಿತು,ಅಹಂಕಾರ ಬಿಡುತ್ತಾರೆಂಬ ವಿಶ್ವಾಸವಿದೆ:ಸೋನಿಯಾ ಗಾಂಧಿ
ಹೊಸದಿಲ್ಲಿ: ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ನರೇಂದ್ರ ಮೋದಿ ಸರಕಾರದ ನಿರ್ಧಾರವನ್ನು ಶುಕ್ರವಾರ ರಾತ್ರಿ ಶ್ಲಾಘಿಸಿದ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಇದನ್ನು 62 ಕೋಟಿ ರೈತರು ಹಾಗೂ ರೈತ ಕಾರ್ಮಿಕರ ಹಾಗೂ 700 ಕ್ಕೂ ಹೆಚ್ಚು ರೈತ ಕುಟುಂಬಗಳ ತ್ಯಾಗದ ಹೋರಾಟ ಮತ್ತು ಇಚ್ಛಾಶಕ್ತಿಯ ವಿಜಯ ಎಂದು ಬಣ್ಣಿಸಿದ್ದಾರೆ. ಪ್ರಧಾನಿ ಮೋದಿ ಇದರಿಂದ ಪಾಠ ಕಲಿತು ತಮ್ಮ ಅಹಂಕಾರ ಬಿಡುತ್ತಾರೆಂಬ ವಿಶ್ವಾಸವಿದೆ ಎಂದರು.
"ರೈತ ವಿರೋಧಿ ಕಾನೂನುಗಳು ಸೋತಿವೆ ಹಾಗೂ ಅನ್ನದಾತ (ರೈತ) ವಿಜಯಶಾಲಿಯಾಗಿ ಹೊರಹೊಮ್ಮಿದ್ದಾನೆ" ಎಂದು ಅವರು ಹೇಳಿದರು.
"ರೈತ ವಿರೋಧಿ, ಕಾರ್ಮಿಕ ವಿರೋಧಿ ಪಿತೂರಿ ... ಸರ್ವಾಧಿಕಾರಿ ಆಡಳಿತಗಾರರ ದುರಹಂಕಾರವನ್ನು ಅವರು ಕಟುವಾಗಿ ಟೀಕಿಸಿದರು.
ರೈತರಿಗೆ ಎಂಎಸ್ ಪಿ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಸೋನಿಯಾ ''ಸುಮಾರು 12 ತಿಂಗಳ ರೈತರ ಆಂದೋಲನದ ನಂತರ ಇಂದು 62 ಕೋಟಿ ರೈತರ ಮತ್ತು ರೈತ ಕಾರ್ಮಿಕರ ಹೋರಾಟ ಮತ್ತು ಇಚ್ಛಾಶಕ್ತಿಯ ವಿಜಯವಾಗಿದೆ... 700 ಕ್ಕೂ ಹೆಚ್ಚು ರೈತ ಕುಟುಂಬಗಳ ತ್ಯಾಗಕ್ಕೆ ಫಲ ಸಿಕ್ಕಿದೆ... ಇಂದು ಸತ್ಯ, ನ್ಯಾಯ ಮತ್ತು ಅಹಿಂಸೆಗೆ ಜಯ ಸಿಕ್ಕಿದೆ'' ಅವರು ಹೇಳಿದರು.
"ಇಂದು ಅಧಿಕಾರದಲ್ಲಿರುವ ಜನರು ರೂಪಿಸಿದ ರೈತ, ಕಾರ್ಮಿಕ ವಿರೋಧಿ ಷಡ್ಯಂತ್ರವನ್ನು ಸೋಲಿಸಲಾಗಿದೆ ಹಾಗೂ ಸರ್ವಾಧಿಕಾರಿ ಆಡಳಿತಗಾರರ ದುರಹಂಕಾರವನ್ನು ಕೂಡ ಸೋಲಿಸಲಾಗಿದೆ. ಇಂದು ಮೂರು ರೈತ ವಿರೋಧಿ ಕಾನೂನುಗಳು ಸೋತಿವೆ ಹಾಗೂ ಅನ್ನದಾತ ವಿಜಯಶಾಲಿಯಾಗಿ ಹೊರಹೊಮ್ಮಿದ್ದಾನೆ’’ ಎಂದು ಸೋನಿಯಾ ಗಾಂಧಿ ಘೋಷಿಸಿದರು.