ನಿಗದಿತ ಸಮಯಕ್ಕೆ ಶುಲ್ಕ ಪಾವತಿಸಲು ಸಾಧ್ಯವಾಗದ ದಲಿತ ವಿದ್ಯಾರ್ಥಿಗೆ ಬಾಂಬೆ ಐಐಟಿಯಲ್ಲಿ ಸೀಟು ಕಲ್ಪಿಸಲು ಸುಪ್ರೀಂ ಆದೇಶ
ಹೊಸದಿಲ್ಲಿ: ಐಐಟಿ ಪರೀಕ್ಷೆಗೆ ಅರ್ಹತೆ ಪಡೆದಿದ್ದ 17ರ ಹರೆಯದ ದಲಿತ ವಿದ್ಯಾರ್ಥಿ ತಾಂತ್ರಿಕ ದೋಷಗಳಿಂದಾಗಿ ಸಕಾಲದಲ್ಲಿ ಶುಲ್ಕ ಪಾವತಿಸಲು ವಿಫಲವಾದ ಕಾರಣ ಸೀಟು ವಂಚಿತನಾಗಿದ್ದ. ಸೋಮವಾರ ಈ ಬಾಲಕನ ರಕ್ಷಣೆ ಮುಂದಾದ ಸುಪ್ರೀಂಕೋರ್ಟ್, ಬಾಂಬೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸೀಟು ಕಲ್ಪಿಸುವಂತೆ ನಿರ್ದೇಶನ ನೀಡಿದೆ ಎಂದು barandbench.com ವರದಿ ಮಾಡಿದೆ.
ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಹಾಗೂ ಎ.ಎಸ್. ಬೋಪಣ್ಣ ಅವರನ್ನೊಳಗೊಂಡ ನ್ಯಾಯ ಪೀಠವು ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ತನ್ನ ಅಧಿಕಾರವನ್ನು ಚಲಾಯಿಸಿ ಜಂಟಿ ಸೀಟು ಹಂಚಿಕೆ ಪ್ರಾಧಿಕಾರಕ್ಕೆ (ಜೋಸಾ) ವಿದ್ಯಾರ್ಥಿಗೆ ಸೀಟು ಮೀಸಲಿಡುವಂತೆ ನಿರ್ದೇಶಿಸಿತು. ತನ್ನದಲ್ಲದ ತಪ್ಪಿಗೆ ಬಾಲಕ ಸೀಟು ತಪ್ಪಿಸಿಕೊಂಡರೆ ಅದು ನ್ಯಾಯದ ದೊಡ್ಡ ವಿಡಂಬನೆಯಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
"ಬಾಂಬೆ ಐಐಟಿಯಲ್ಲಿ ನೀಡಲಾಗಿದ್ದ ಮೌಲ್ಯದ ಸೀಟು ಕಳೆದುಕೊಳ್ಳುವ ಅಂಚಿನಲ್ಲಿರುವ ದಲಿತ ವಿದ್ಯಾರ್ಥಿಯೊಬ್ಬರು ಈ ನ್ಯಾಯಾಲಯದ ಮುಂದೆ ಇದ್ದಾರೆ. ಶುಲ್ಕ ಪಾವತಿಗೆ ಪ್ರಯತ್ನಿಸಿದರೂ ಶುಲ್ಕ ಪಾವತಿಸಲು ಸಾಧ್ಯವಾಗದೇ ಇರುವ ಕಾರಣಕ್ಕೆ ದಲಿತ ಯುವ ವಿದ್ಯಾರ್ಥಿಗೆ ಪ್ರವೇಶ ನಿರಾಕರಿಸಿದರೆ ಅದು ನ್ಯಾಯದ ದೊಡ್ಡ ಅಣಕವಾಗುತ್ತದೆ. ಆದ್ದರಿಂದ ಮಧ್ಯಂತರ ಹಂತದಲ್ಲಿ ಇದು ಆರ್ಟಿಕಲ್ 142 ರ ಸೂಕ್ತ ಪ್ರಕರಣ ಎಂದು ನಾವು ಭಾವಿಸುತ್ತೇವೆ"ಎಂದು ನ್ಯಾಯಾಲಯ ಹೇಳಿದೆ.
ಹಾಗಾಗಿ ಯಾವುದೇ ವಿದ್ಯಾರ್ಥಿಯ ಪ್ರವೇಶಕ್ಕೆ ತೊಂದರೆಯಾಗದಂತೆ ಬಾಂಬೆ ಐಐಟಿಯಲ್ಲಿ ಸೀಟು ಹಂಚಿಕೆ ಮಾಡುವಂತೆ ಆದೇಶಿಸಿದೆ.
ಎಲ್ಲಾ ಸೀಟುಗಳನ್ನು ಭರ್ತಿ ಮಾಡಲಾಗಿದೆ ಹಾಗೂ ಯಾವುದೇ ಖಾಲಿ ಸೀಟುಗಳು ಲಭ್ಯವಿಲ್ಲ ಎಂದು ಜಂಟಿ ಸೀಟು ಹಂಚಿಕೆ ಪ್ರಾಧಿಕಾರ ಇಂದು ನ್ಯಾಯಾಲಯಕ್ಕೆ ತಿಳಿಸಿದ ನಂತರ ಈ ಆದೇಶವನ್ನು ನೀಡಲಾಗಿದೆ.
ತಾಂತ್ರಿಕ ದೋಷಗಳಿಂದಾಗಿ ವಿದ್ಯಾರ್ಥಿಯು ಸರಿಯಾದ ಸಮಯಕ್ಕೆ ಶುಲ್ಕವನ್ನು ಪಾವತಿಸಲು ಸಾಧ್ಯವಾಗಲಿಲ್ಲ. ಅದಕ್ಕೆ ವಿದ್ಯಾರ್ಥಿಯು ಜವಾಬ್ದಾರನಲ್ಲ ಎಂದ ನ್ಯಾಯಾಲಯವು ವಿದ್ಯಾರ್ಥಿಯ ರಕ್ಷಣೆಗೆ ಬಂದಿದೆ.