"ಭಾರತವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ" ಎಂದು ಕೇರಳದ ಕಾರ್ಟೂನಿಸ್ಟ್ ವಿರುದ್ಧ ಹೈಕೋರ್ಟ್ ಗೆ ಮೊರೆ
ಹೊಸದಿಲ್ಲಿ: ಕೋವಿಡ್-19 ಜಾಗತಿಕ ವೈದ್ಯಕೀಯ ಶೃಂಗಸಭೆಯಲ್ಲಿ ಭಾರತವನ್ನು ʼದನ'ದ ರೂಪದಲ್ಲಿ ಬಿಂಬಿಸಿದ ವ್ಯಂಗ್ಯಚಿತ್ರವೊಂದಕ್ಕೆ ಪ್ರಶಸ್ತಿ ನೀಡಿದ ಕೇರಳ ಲಲಿತಕಲಾ ಅಕಾಡೆಮಿಯ ವಿರುದ್ಧ ಕೇರಳ ಹೈಕೋರ್ಟಿನಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.
ಕೇರಳ ವ್ಯಂಗ್ಯಚಿತ್ರ ಅಕಾಡೆಮಿ ಕಾರ್ಯದರ್ಶಿ ಅನೂಪ್ ರಾಧಾಕೃಷ್ಣನ್ ಅವರು ರಚಿಸಿರುವ ಈ ʼಕೋವಿಡ್-19 ಗ್ಲೋಬಲ್ ಮೆಡಿಕಲ್ ಸಮ್ಮಿಟ್ʼ ಶೀರ್ಷಿಕೆಯ ವ್ಯಂಗ್ಯಚಿತ್ರದಲ್ಲಿ ಇಂಗ್ಲೆಂಡ್, ಚೀನಾ, ಅಮೆರಿಕಾದ ಪ್ರತಿನಿಧಿಗಳು ಮಾನವ ರೂಪದಲ್ಲಿದ್ದರೆ ಭಾರತದ ಪ್ರತಿನಿಧಿಯ ಮುಖ ಗೋವಿನದ್ದಾಗಿದೆ. ಲಲಿತಕಲಾ ಅಕಾಡೆಮಿಯು 2019 ಹಾಗೂ 2020 ವರ್ಷದ ಪ್ರಶಸ್ತಿಗಳನ್ನು ಘೋಷಿಸಿದ್ದು ಅವುಗಳಲ್ಲಿ ಈ ವ್ಯಂಗ್ಯಚಿತ್ರಕ್ಕೆ ಗೌರವ ಪ್ರಶಸ್ತಿ ಹಾಗೂ ರೂ 25,000 ನಗದು ಬಹುಮಾನ ಲಭಿಸಿದೆ. ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟದಾಗಿ ಬಿಂಬಿಸುವ ಯತ್ನವನ್ನು ಈ ವ್ಯಂಗ್ಯಚಿತ್ರ ಮಾಡಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಕೇರಳ ಯುವಮೋರ್ಚ ರಾಜ್ಯ ಕಾರ್ಯದರ್ಶಿ ಬಿ.ಜಿ ವಿಷ್ಣು ಈ ಕುರಿತಂತೆ ರಾಜ್ಯ ಡಿಜಿಪಿಗೆ ದೂರು ನೀಡಿದ್ದು ಅದರಲ್ಲಿ ವ್ಯಂಗ್ಯಚಿತ್ರಕಾರ ಅನೂಪ್ ರಾಧಾಕೃಷ್ಣನ್ ಹಾಗೂ ಲಲಿತಕಲಾ ಅಕಾಡೆಮಿ ಕಾರ್ಯದರ್ಶಿ ನೆಮೊಮ್ ಪುಷ್ಪರಾಜ್ ಅವರನ್ನು ಹೆಸರಿಸಲಾಗಿದೆ.