ಮಾದಕ ದ್ರವ್ಯ ಪಿಡುಗಿನ ವರದಿ ರಾಜ್ಯ ಸರಕಾರ ಬಹಿರಂಗಪಡಿಸದೇ ಇದ್ದರೆ ಉಪವಾಸ ಮುಷ್ಕರ: ನವಜೋತ್ ಸಿಂಗ್ ಸಿಧು
ಹೊಸದಿಲ್ಲಿ, ನ. 25: ಮಾದಕ ದ್ರವ್ಯದ ಪಿಡುಗು ಹಾಗೂ 2015ರಲ್ಲಿ ಗುರು ಗ್ರಂಥ ಸಾಹಿಬ್ಗೆ ಮಾಡಿದ ಅಗೌರದ ವರದಿಯನ್ನು ರಾಜ್ಯ ಸರಕಾರ ಬಹಿರಂಗಪಡಿಸದೇ ಇದ್ದರೆ ಉಪವಾಸ ಮುಷ್ಕರ ಆರಂಭಿಸಲಾಗುವುದು ಎಂದು ಪಂಜಾಬ್ ಕಾಂಗ್ರೆಸ್ ವರಿಷ್ಠ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ. ಮಾದಕ ದ್ರವ್ಯ ಪಿಡುಗಿನ ಕುರಿತ ವಿಶೇಷ ಕಾರ್ಯ ಪಡೆಯ ವರದಿಯನ್ನು ಬಹಿರಂಗಗೊಳಿಸಬೇಕು ಹಾಗೂ ಮಾದಕದ್ರವ್ಯ ಭಯೋತ್ಪಾದನೆಗೆ ಕಾರಣವಾಗಿರುವ ದೊಡ್ಡ ಕುಳಗಳನ್ನು ಹಿಡಿಯಲು ಸಮಯ ಮಿತಿಯ ತನಿಖೆ ಆರಂಭಿಸಬೇಕು ಎಂದು ನವಜೋತ್ ಸಿಂಗ್ ಸಿಧು ಅವರು ಬುಧವಾರ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಮಾದಕ ದ್ರವ್ಯ ಮಾಫಿಯಾದ ಬೆನ್ನೆಲುಬನ್ನು ನಾಲ್ಕು ವಾರಗಳ ಒಳಗೆ ಮುರಿಯಲಾಗುವುದು ಎಂದು 2017ರಲ್ಲಿ ಕಾಂಗ್ರೆಸ್ ಜನರಿಗೆ ಭರವಸೆ ನೀಡಿತ್ತು ಎಂದು ಅವರು ನೆನಪಿಸಿದರು. ‘‘2017ರಿಂದ 2020ರ ವರೆಗಿನ ಎನ್ಸಿಆರ್ಬಿ ವರದಿಯ ಪ್ರಕಾರ ಎನ್ಡಿಪಿಎಸ್ (ಮಾದಕ ದ್ರವ್ಯ ಹಾಗೂ ಸೈಕೋಟ್ರೋಪಿಕ್ ವಸ್ತುಗಳು) ಅಪರಾಧ ಪ್ರಕರಣಗಳಲ್ಲಿ ಪಂಜಾಬ್ ತನ್ನ ಸ್ಥಾನವನ್ನು ಕಳೆದ ನಾಲ್ಕು ವರ್ಷಗಳಿಂದ ನಿರಂತರ ಉಳಿಸಿಕೊಂಡಿದೆ’’ ಎಂದು ಸಿಧು ಅವರು ಸರಣಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಎಸ್ಟಿಎಫ್ನ ವರದಿಯ ಆಧಾರದಲ್ಲಿ ಕ್ರಮ ತೆಗೆದುಕೊಳ್ಳಲು ಸರಕಾರಕ್ಕೆ ಎಲ್ಲ ರೀತಿಯ ಅಧಿಕಾರ ಇದೆ ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.