ಲಾಕ್ ಡೌನ್ ತಪ್ಪಿಸಲು ಕೋವಿಡ್ ಸೂಕ್ತ ನಡವಳಿಕೆ ಅನುಸರಿಸಿ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ
ಮುಂಬೈ: ರಾಜ್ಯದಲ್ಲಿ ಮತ್ತೊಂದು ಕೊರೋನವೈರಸ್-ಪ್ರೇರಿತ ಲಾಕ್ಡೌನ್ ಅನ್ನು ತಪ್ಪಿಸಲು ಜನರು ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೋಮವಾರ ಹೇಳಿದ್ದಾರೆ ಎಂದು ವರದಿಯಾಗಿದೆ.
ವೈರಸ್ನ ಹೊಸ ರೂಪಾಂತರ ಒಮಿಕ್ರಾನ್ ನಿಂದ ನಾಗರಿಕರನ್ನು ರಕ್ಷಿಸಲು ಕೇಂದ್ರ ಸರಕಾರದ ನಿರ್ದೇಶನಗಳನ್ನು ಕಾಯದೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಠಾಕ್ರೆ ಸೂಚಿಸಿದ್ದಾರೆ.
ಮಹಾರಾಷ್ಟ್ರದಲ್ಲಿನ ಕೊರೋನವೈರಸ್ ಸನ್ನಿವೇಶ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಓಮಿಕ್ರಾನ್ ರೂಪಾಂತರದ ದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚರ್ಚಿಸಲು ನಡೆದ ವಿಭಾಗೀಯ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳೊಂದಿಗಿನ ವರ್ಚುವಲ್ ಸಭೆಯಲ್ಲಿ ಸಿಎಂ ಠಾಕ್ರೆ ಮಾತನಾಡಿದರು.
"ಕೋವಿಡ್-19 ನ ಹೊಸ ಮಾರಣಾಂತಿಕ ರೂಪಾಂತರವನ್ನು ತಡೆಗಟ್ಟಲು ಏನು ಬೇಕಾದರೂ ಮಾಡಿ. ಕೇಂದ್ರ ಸರಕಾರದ ನಿರ್ದೇಶನಗಳಿಗಾಗಿ ಕಾಯದೆ ಕೆಲಸ ಪ್ರಾರಂಭಿಸಿ" ಎಂದು ಮಹಾರಾಷ್ಟ್ರ ಸಿಎಂ ಅಧಿಕಾರಿಗಳನ್ನು ಕೇಳಿದರು.
"ರಾಜ್ಯದಲ್ಲಿ ಮತ್ತೊಂದು ಲಾಕ್ಡೌನ್ ತಡೆಯಲು ನಾಗರಿಕರು ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸಬೇಕು" ಎಂದು ಅವರು ಹೇಳಿದರು.
ಇಂದಿನ ಸಭೆಯಲ್ಲಿ ಸಿಎಂ ಠಾಕ್ರೆ ಅವರು ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಇಳಿಯುವ ಎಲ್ಲಾ ಪ್ರಯಾಣಿಕರ ಮೇಲೆ ನಿಗಾ ಇಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ಹೇಳಿಕೆಯಲ್ಲಿ ತಿಳಿಸಿದೆ.