ಸ್ವಾತಂತ್ರದ ಭಿಕ್ಷೆ ಹೇಳಿಕೆ: ಆಗ್ರಾದಲ್ಲಿ ಕಂಗನಾ ವಿರುದ್ಧ ಅರ್ಜಿ ದಾಖಲು
ಅರ್ಜಿಯಲ್ಲಿ ಪ್ರಧಾನಿ ಹೆಸರು ಸೇರಿಸಿದಕ್ಕೆ ಆಕ್ಷೇಪ
ನಟಿ ಕಂಗನಾ ರಣಾವತ್
ಆಗ್ರಾ,ಡಿ.3: ಬಾಲಿವುಡ್ ನಟಿ ಕಂಗನಾ ರಣಾವತ್ರ ‘ಸ್ವಾತಂತ್ರದ ಭಿಕ್ಷೆ ’ ಹೇಳಿಕೆಗಾಗಿ ಅವರ ವಿರುದ್ಧ ಕಾನೂನು ಕ್ರಮವನ್ನು ಕೋರಿ ಇಲ್ಲಿಯ ರಾಜೀವ್ ಗಾಂಧಿ ವಕೀಲರ ಸಂಘದ ಅಧ್ಯಕ್ಷ ರಮಾಶಂಕರ ಶರ್ಮಾ ಅವರು ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದು,ಡಿ.15ರಂದು ವಿಚಾರಣೆ ನಡೆಯಲಿದೆ.
ಕಂಗನಾರ ಹೇಳಿಕೆಯ ವಿರುದ್ಧ ಕ್ರಮವನ್ನು ಕೈಗೊಳ್ಳುವಲ್ಲಿ ಕೇಂದ್ರ ಸರಕಾರದ ನಿಷ್ಕ್ರಿಯತೆಯನ್ನು ಆರೋಪಿಸಿರುವ ಶರ್ಮಾ,ತನ್ನ ಅರ್ಜಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನೂ ಹೆಸರಿಸಿದ್ದಾರೆ.
ಕಂಗನಾ ಸ್ವಾತಂತ್ರ ಹೋರಾಟಗಾರರನ್ನು ಮತ್ತು ಮಹಾತ್ಮಾ ಗಾಂಧಿಯವರ ಅಹಿಂಸಾ ನೀತಿಯನ್ನು ಗೇಲಿ ಮಾಡಿದ್ದಾರೆ ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ.
ಬಿಜೆಪಿ ನಾಯಕಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನೂ ತನ್ನ ಅರ್ಜಿಯಲ್ಲಿ ಹೆಸರಿಸಿರುವ ಶರ್ಮಾ ಮಹಾತ್ಮಾ ಗಾಂಧಿಯವರನ್ನು ಅವಮಾನಿಸಿರುವ ಅವರ ವಿರುದ್ಧ ಕ್ರಮಕ್ಕಾಗಿ ಕೋರಿದ್ದಾರೆ.
ಶರ್ಮಾರ ಅರ್ಜಿಗೆ ಪ್ರತಿಕ್ರಿಯಿಸಿದ ಸಾಮಾಜಿಕ ಕಾರ್ಯಕರ್ತ ವಿಜಯ ಉಪಾಧ್ಯಾಯ ಅವರು,ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಧಾನಿಯವರನ್ನು ಹೆಸರಿಸಿರುವುದು ಸರಿಯಲ್ಲ. ಭಾರತದ ಪ್ರಧಾನಿ ಹುದ್ದೆಯು ದೇಶದಲ್ಲಿ ಮಾತ್ರವಲ್ಲ,ಜಾಗತಿಕವಾಗಿಯೂ ಗೌರವಾನ್ವಿತ ಹುದ್ದೆಯಾಗಿದೆ. ಈ ಚರ್ಚೆಯಲ್ಲಿ ಪ್ರಧಾನಿಯವರ ಹೆಸರನ್ನು ಎಳೆದುತರುವುದು ಸೂಕ್ತವಲ್ಲ ಎಂದು ಹೇಳಿದರು.