ರೈತರಿಂದ ಎಂಎಸ್ಪಿ, ಬಾಕಿಯಿರುವ ಇತರ ಬೇಡಿಕೆಗಳ ಕುರಿತು ಕೇಂದ್ರದೊಂದಿಗೆ ಮಾತುಕತೆಗೆ ಐವರು ಸದಸ್ಯರ ಸಮಿತಿ ರಚನೆ
ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ
ಹೊಸದಿಲ್ಲಿ, ಡಿ.4: ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಮತ್ತು ಇತರ ಬೇಡಿಕೆಗಳ ಕುರಿತು ಸರಕಾರದೊಂದಿಗೆ ಮಾತುಕತೆ ನಡೆಸಲು ಐವರು ಸದಸ್ಯರ ಸಮಿತಿಯೊಂದನ್ನು ರೈತರು ಶನಿವಾರ ರಚಿಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಎಎಂ) ಆಯೋಜಿಸಿದ ಸಭೆಯಲ್ಲಿ ಸಮಿತಿ ರಚನೆ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಬಲಬೀರ್ ಸಿಂಗ್ ರಾಜೇವಾಲ್,ಶಿವಕುಮಾರ ಕಕ್ಕಾ,ಗುರ್ನಾಮ ಸಿಂಗ್ ಚರುನಿ,ಯುಧ್ವೀರ್ ಸಿಂಗ್ ಮತ್ತು ಅಶೋಕ ಧವಳೆ ಅವರು ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಎಸ್ಕೆಎಂ ತನ್ನ ಮುಂದಿನ ಸಭೆಯನ್ನು ಡಿ.7ರಂದು ನಡೆಸಲಿದೆ ಎಂದು ರೈತನಾಯಕ ರಾಕೇಶ್ ಟಿಕಾಯತ್ ತಿಳಿಸಿದರು.
ಮಂಗಳವಾರ ಸರಕಾರವು ಬಾಕಿಯಿರುವ ಬೇಡಿಕೆಗಳ ಕುರಿತು ಚರ್ಚಿಸಲು ಐದು ಹೆಸರುಗಳನ್ನು ಸೂಚಿಸುವಂತೆ ಎಸ್ಕೆಎಮ್ಗೆ ತಿಳಿಸಿತ್ತು.
ಸಂಸತ್ತು ಸೋಮವಾರ ಕೃಷಿಕಾಯ್ದೆಗಳನ್ನು ರದ್ದುಗೊಳಿಸಿದೆಯಾದರೂ ತಮ್ಮ ಇತರ ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ರೈತ ನಾಯಕರು ತಿಳಿಸಿದ್ದಾರೆ. ಎಂಎಸ್ಪಿಗೆ ಕಾನೂನುಬದ್ಧ ಖಾತರಿ, ಪ್ರತಿಭಟನೆ ಸಂದರ್ಭ ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಹಿಂದೆಗೆತ, ಕೇಂದ್ರ ಸಂಪುಟದಿಂದ ಸಹಾಯಕ ಗೃಹಸಚಿವ ಅಜಯ ಮಿಶ್ರಾರ ವಜಾ ಇತ್ಯಾದಿಗಳು ಈ ಬೇಡಿಕೆಗಳಲ್ಲಿ ಸೇರಿವೆ.
ಮಿಶ್ರಾರ ಪುತ್ರ ಆಶಿಷ್ ಮಿಶ್ರಾ ಅಕ್ಟೋಬರ್ನಲ್ಲಿ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಗುಂಪಿನ ಮೇಲೆ ವಾಹನವನ್ನು ನುಗ್ಗಿಸಿದ್ದ ಆರೋಪಿಯಾಗಿದ್ದು,ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಮೃತಪಟ್ಟಿದ್ದರು.
ಶೂನ್ಯ ಬಜೆಟ್ ಆಧಾರಿತ ಕೃಷಿ, ಬೆಳೆ ಮಾದರಿಗಳಲ್ಲಿ ಬದಲಾವಣೆ ಹಾಗೂ ಹೆಚ್ಚು ಪರಿಣಾಮಕಾರಿ ಮತ್ತು ಪಾರದರ್ಶಕ ಎಂಎಸ್ಪಿಯಂತಹ ವಿಷಯಗಳ ಬಗ್ಗೆ ಚರ್ಚಿಸಲು ಕೃಷಿ ಕುರಿತು ಸರಕಾರಿ ಮಟ್ಟದ ಸಮಿತಿಯನ್ನು ರಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ನ.19ರಂದು ಪ್ರಕಟಿಸಿದ್ದರು. ಸಮಿತಿಯು ಕೇಂದ್ರ,ರಾಜ್ಯ ಸರಕಾರಗಳು,ರೈತರು,ಕೃಷಿ ವಿಜ್ಞಾನಿಗಳು ಮತ್ತು ಕೃಷಿ ಆರ್ಥಿಕ ತಜ್ಞರ ಪ್ರತಿನಿಧಿಗಳನ್ನು ಒಳಗೊಂಡಿರಲಿದೆ ಎಂದು ಅವರು ತಿಳಿಸಿದ್ದರು.