ಪ್ರತಿಪಕ್ಷಗಳು ಕ್ಷಮೆಯಾಚಿಸಿದರೆ ಸಂಸದರ ಮೇಲಿನ ಅಮಾನತು ಹಿಂಪಡೆಯಲು ಸಿದ್ಧ: ಪ್ರಹ್ಲಾದ್ ಜೋಶಿ
ಹೊಸದಿಲ್ಲಿ: ಅಮಾನತುಗೊಂಡಿರುವ ರಾಜ್ಯಸಭಾ ಸಂಸದರು ಕ್ಷಮೆಯಾಚಿಸಿದರೆ ಅವರ ಅಮಾನತು ರದ್ದುಗೊಳಿಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಂಗಳವಾರ ಹೇಳಿದ್ದಾರೆ.
ಹೊಸದಿಲ್ಲಿಯ ಡಾ.ಅಂಬೇಡ್ಕರ್ ಅಂತರ್ ರಾಷ್ಟ್ರೀಯ ಕೇಂದ್ರದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಸಂಸದರ ಅಮಾನತಿಗೆ ಕಾರಣವನ್ನು ಸಚಿವರುಗಳು ವಿವರಿಸಿದರು ಎಂದು ಕೇಂದ್ರ ಸಚಿವರು ಹೇಳಿದರು.
ಅವರನ್ನು ಏಕೆ ಅಮಾನತುಗೊಳಿಸಬೇಕು ಎಂದು ವಿವರಿಸಿದ್ದೇವೆ. ಏನು ನಡೆದಿದೆ ಎನ್ನುವುದಕ್ಕೆ ದೇಶವೇ ಸಾಕ್ಷಿಯಾಗಿದೆ. ಇದು ದಾಖಲೆಯಲ್ಲಿದೆ. ಅವರು ಇಂದಿಗೂ ಕ್ಷಮೆಯಾಚಿಸಿದರೆ, ಅಮಾನತು ಹಿಂಪಡೆಯಲು ನಾವು ಸಿದ್ಧರಿದ್ದೇವೆ ಎಂದು ಜೋಶಿ ಬಿಜೆಪಿಯ ಸಂಸದೀಯ ಪಕ್ಷದ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಮುಂಗಾರು ಅಧಿವೇಶನದ ಕೊನೆಯ ದಿನದಂದು ಗದ್ದಲ ಸೃಷ್ಟಿಸಿದ ಆರೋಪದ ಮೇಲೆ ಸಂಸತ್ತಿನ ಉಳಿದ ಚಳಿಗಾಲದ ಅಧಿವೇಶನಕ್ಕಾಗಿ ಒಟ್ಟು 12 ಪ್ರತಿಪಕ್ಷ ಸಂಸದರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.