ತ್ರಿಪುರಾ ಕೋಮು ಹಿಂಸಾಚಾರ ವರದಿ ಮಾಡಿದ್ದ ಪತ್ರಕರ್ತೆಯರ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ
Photo: Twitter/@jha_swarnaa and @Samriddhi0809
ಹೊಸದಿಲ್ಲಿ, ಡಿ. 8: ತ್ರಿಪುರಾದಲ್ಲಿ ಧಾರ್ಮಿಕ ವಿಧ್ವಂಸಕ ಕೃತ್ಯ ನಡೆದ ಬಗ್ಗೆ ವರದಿ ಮಾಡಿದ ಇಬ್ಬರು ಪತ್ರಕರ್ತೆಯರ ವಿರುದ್ಧದ ಕ್ರಮಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ತಡೆ ವಿಧಿಸಿದೆ. ಅಲ್ಲದೆ, ತ್ರಿಪುರಾ ಪೊಲೀಸರಿಗೆ ನೋಟಿಸು ಜಾರಿ ಮಾಡಿದೆ.
ನ್ಯಾಯಾಲಯ ಅರ್ಜಿದಾರರಿಗೆ ಪ್ರತಿ ಅಫಿಡಾವಿಟ್ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿತು ಹಾಗೂ ತ್ರಿಪುರಾಕ್ಕೆ ಸ್ಥಾಯಿ ನ್ಯಾಯವಾದಿಯ ಸೇವೆ ಒದಗಿಸುವ ಸ್ವಾತಂತ್ರ ನೀಡಿತು. ಸ್ಥಳೀಯ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಕಾರ್ಯಕರ್ತರು ಉನಕೋಟಿ ಜಿಲ್ಲೆಯ ಫಟಿಕ್ರೋಯ್ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ದೂರಿನ ಆಧಾರದಲ್ಲಿ ಪತ್ರಕರ್ತೆಯರಾದ ಸಮೃದ್ಧಿ ಕೆ. ಸುಕನ್ಯಾ ಹಾಗೂ ಸ್ವರ್ಣಾ ಝಾ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಪೊಲೀಸರ ಈ ಕ್ರಮವನ್ನು ಪತ್ರಕರ್ತೆಯರು ಪ್ರಶ್ನಿಸಿದ್ದಾರೆ. ಅಲ್ಲದೆ, ನಾವು ಘಟನೆಯ ವರದಿಯನ್ನು ಮಾತ್ರ ಮಾಡಿದ್ದೇವೆ. ಅಲ್ಲದೆ, ಹಿಂಸಾಚಾರದ ಸಂತ್ರಸ್ತರು ತಮಗೆ ನೀಡಿದ ಆಯಾಮವನ್ನು ಆಧರಿಸಿ ವರದಿ ರೂಪಿಸಿದ್ದೇವೆ. ಮಾದ್ಯಮವನ್ನು ಗುರಿಯಾಗಿರಿಸಿ ಕಿರುಕುಳ ನೀಡುವುದು ಎಫ್ಐಆರ್ನ ಉದ್ದೇಶ ಎಂದು ಅವರು ವಾದಿಸಿದ್ದಾರೆ. ಎಫ್ಐಆರ್ ಅನ್ನು ಕೂಡಲೇ ರದ್ದುಗೊಳಿಸುವಂತೆ ಹಾಗೂ ತ್ರಿಪುರಾದಲ್ಲಿ ತಮ್ಮ ಜೀವಕ್ಕೆ ಬೆದರಿಕೆ ಹಾಗೂ ಅಪಾಯ ಇರುವುದರಿಂದ ದೂರುಗಳನ್ನು ದಿಲ್ಲಿಗೆ ವರ್ಗಾಯಿಸುವಂತೆ ಅವರು ಆಗ್ರಹಿಸಿದ್ದಾರೆ. ತನ್ನ ಇಬ್ಬರು ಪತ್ರಕರ್ತೆಯರನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುವ ಮುನ್ನ ಎಚ್ಡಬ್ಲು ನ್ಯೂಸ್ ನೆಟವರ್ಕ್ ಸಮಾಜಿಕ ಜಾಲ ತಾಣದಲ್ಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿತ್ತು. ‘‘ಎಚ್ಡಬ್ಲು ನೆಟ್ವರ್ಕ್ನ ಪತ್ರಕರ್ತರಾದ ಸಮೃದ್ಧಿ ಸುಕನ್ಯಾ ಹಾಗೂ ಸ್ವರ್ಣಾ ಝಾ ಅವರು ಸಿಲ್ಚಾರ್ಗೆ ತೆರಳುತ್ತಿದ್ದ ಸಂದರ್ಭ ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ನಮ್ಮ ಪತ್ರಕರ್ತೆಯರ ವಿರುದ್ಧ ಯಾವುದೇ ಪ್ರಕರಣ ಇಲ್ಲ ಎಂದು ಅಸ್ಸಾಂ ಪೊಲೀಸರು ಹೇಳಿದ್ದಾರೆ. ಆದರೆ, ಅವರನ್ನು ವಶಕ್ಕೆ ತೆಗೆದುಕೊಳ್ಳುವಂತೆ ತ್ರಿಪುರಾ ಸರಕಾರ ತಮಗೆ ತಿಳಿಸಿದೆ ಎಂದು ಅಸ್ಸಾಂ ಪೋಲೀಸರು ತಿಳಿಸಿದ್ದಾರೆ’’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.