ಶ್ರೀನಗರದ ಸಮೀಪ ಪೊಲೀಸ್ ಬಸ್ ಮೇಲೆ ಉಗ್ರರ ದಾಳಿ ಇಬ್ಬರು ಪೊಲೀಸರು ಸಾವು, 12 ಮಂದಿಗೆ ಗಾಯ
ಸಾಂದರ್ಭಿಕ ಚಿತ್ರ
ಶ್ರೀನಗರ, ಡಿ. 13: ಶ್ರೀನಗರದ ಹೊರವಲಯದ ಝಿವಾನ್ನಲ್ಲಿರುವ ಪೊಲೀಸ್ ಕ್ಯಾಂಪ್ ಸಮೀಪ ಸೋಮವಾರ ಪೊಲೀಸ್ ಬಸ್ ಅನ್ನು ಗುರಿಯಾಗಿಸಿ ಇಬ್ಬರು ಉಗ್ರರು ದಾಳಿ ನಡೆಸಿದ ಪರಿಣಾಮ ಜಮ್ಮು ಹಾಗೂ ಕಾಶ್ಮೀರ ಶಸಸ್ತ್ರ ಪೊಲೀಸ್ನ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಹಾಗೂ 12 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ಓರ್ವ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಹಾಗೂ ಇನ್ನೋರ್ವ ಸೆಕ್ಷನ್ ಗ್ರೇಡ್ ಕಾನ್ಸ್ಟೆಬಲ್ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಝಿವಾನ್ ಪ್ರದೇಶದ ವಿವಿಧ ಭದ್ರತಾ ಪಡೆಗಳ ಹಲವು ಕ್ಯಾಂಪ್ಗಳು ಇರುವ ಅತ್ಯಧಿಕ ಭದ್ರತಾ ಪ್ರದೇಶದಲ್ಲಿದ್ದ ಬಸ್ಸಿನ ಮೇಲೆ ಭಯೋತ್ಪಾದಕರು ಭಾರೀ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆ ನಡೆದ ಪ್ರದೇಶವನ್ನು ಭದ್ರತಾ ಪಡೆ ಸುತ್ತುವರಿದಿದೆ ಹಾಗೂ ಶೋಧ ಕಾರ್ಯಾಚರಣೆ ಆರಂಭಿಸಿದೆ. ಕಾಶ್ಮೀರದ ಬಂಡಿಪೋರ ಜಿಲ್ಲೆಯಲ್ಲಿ ಪೊಲೀಸ್ ತಂಡದ ಮೇಲೆ ಉಗ್ರರು ಗುಂಡು ಹಾರಿಸಿ ಇಬ್ಬರು ಪೊಲೀಸರನ್ನು ಹತ್ಯೆಗೈದ ಎರಡು ದಿನಗಳ ಬಳಿಕ ಈ ದಾಳಿ ನಡೆದಿದೆ.