ನಮ್ಮ ಪಕ್ಷದ ನಾಯಕರ ಫೋನ್ ಕದ್ದಾಲಿಸಲಾಗುತ್ತಿದೆ: ಅಖಿಲೇಶ್ ಯಾದವ್ ಆರೋಪ
ಲಕ್ನೋ/ಹೊಸದಿಲ್ಲಿ: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ದೊಡ್ಡ ಸವಾಲಾಗಿ ಹೊರಹೊಮ್ಮುತ್ತಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ "ತಮ್ಮ ಪಕ್ಷದ ನಾಯಕರ ಫೋನ್ಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಹಾಗೂ ಪ್ರತಿದಿನ ಸಂಜೆ ಮುಖ್ಯಮಂತ್ರಿ ಧ್ವನಿಮುದ್ರಿಕೆಗಳನ್ನು ಆಲಿಸುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಾದವ್ ಅವರು ಖಾಸಗಿ ಕಾರ್ಯದರ್ಶಿ ಜೈನೇಂದ್ರ ಯಾದವ್, ಪಕ್ಷದ ನಾಯಕ ಹಾಗೂ ವಕ್ತಾರ ರಾಜೀವ್ ರಾಯ್, ಮತ್ತೊಬ್ಬ ಪಕ್ಷದ ನಾಯಕ ಮನೋಜ್ ಯಾದವ್ ಮೇಲೆ ಆದಾಯ ತೆರಿಗೆ ಇಲಾಖೆ ಸರಣಿ ದಾಳಿ ನಡೆಸಿದ ಒಂದು ದಿನದ ನಂತರ ಬಿಜೆಪಿಯ ವಿರುದ್ಧ ಯಾದವ್ ತೀಕ್ಷ್ಣ ವಾಗ್ದಾಳಿ ಆರಂಭಿಸಿದರು.
“ಈ ದಾಳಿಗಳು ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ ಎಂಬುದರ ಸೂಚನೆಯಾಗಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯ ಇಂತಹ ತಂತ್ರಗಳು ಹೆಚ್ಚಾಗುತ್ತಿವೆ. ಈಗ ತೆರಿಗೆ ಇಲಾಖೆ ಬಂದಿದೆ... ಮುಂದಿನ ದಿನಗಳಲ್ಲಿ ಜಾರಿ ನಿರ್ದೇಶನಾಲಯ(ಈಡಿ) ಬರುತ್ತದೆ, ಸಿಬಿಐ ಬರುತ್ತದೆ. ಆದರೆ ಸೈಕಲ್ (ಸಮಾಜವಾದಿ ಪಕ್ಷದ ಚುನಾವಣಾ ಚಿಹ್ನೆ) ನಿಲ್ಲುವುದಿಲ್ಲ" ಅವರು ಹೇಳಿದರು.