ಮಧ್ಯಾಹ್ನದ ಊಟ ಸೇವಿಸಲು ವಿದ್ಯಾರ್ಥಿಗಳು ನಿರಾಕರಣೆ ಹಿನ್ನೆಲೆ: ಅಡುಗೆ ಕೆಲಸದಿಂದ ದಲಿತ ಮಹಿಳೆಯ ವಜಾ
ಡೆಹ್ರಾಡೂನ್, ಡಿ. 23: ಉತ್ತರಾಖಂಡದ ಚಂಪಾವತ್ ಜಿಲ್ಲೆಯ ಸರಕಾರಿ ಪ್ರೌಢ ಶಾಲೆಯಲ್ಲಿ ಮಧ್ಯಾಹ್ನದ ಊಟ ಸಿದ್ಧಪಡಿಸುವ ಕೆಲಸ ನಿರ್ವಹಿಸುತ್ತಿದ್ದ ದಲಿತ ಮಹಿಳೆಯನ್ನು ವಜಾಗೊಳಿಸಲಾಗಿದೆ. ದಲಿತ ಮಹಿಳೆ ಸಿದ್ಧಪಡಿಸಿದ ಆಹಾರವನ್ನು ಮೇಲ್ಜಾತಿಯ ಮಕ್ಕಳು ಸೇವಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸಲಾಗಿದೆ. ಈ ಘಟನೆ ಚಂಪಾವತ್ ಜಿಲ್ಲೆಯ ಸುಖಿಧಾಂಗ್ ಜಿಲ್ಲೆಯ ಶಾಲೆಯಲ್ಲಿ ನಡೆದಿದೆ.
ದಲಿತ ಮಹಿಳೆಯನ್ನು ‘ಭೋಜನ ಮಾತೆ’ಯನ್ನಾಗಿ ನಿಯೋಜಿಸಿದ ಬಳಿಕ ಅವರು ಸಿದ್ಧಪಡಿಸಿದ ಅಡುಗೆಯನ್ನು ಮೇಲ್ಜಾತಿಯ ವಿದ್ಯಾರ್ಥಿಗಳು ಸೇವಿಸುವುದನ್ನು ನಿಲ್ಲಿಸಿದ್ದರು. ಅಲ್ಲದೆ, ಅವರು ಮನೆಯಿಂದಲೇ ಟಿಫಿನ್ನಲ್ಲಿ ಆಹಾರ ತರಲು ಆರಂಭಿಸಿದ್ದರು. ಶಾಲೆಯ 66 ಮಕ್ಕಳಲ್ಲಿ 40 ವಿದ್ಯಾರ್ಥಿಗಳು ಅವರು ಸಿದ್ಧಪಡಿಸಿದ ಆಹಾರವನ್ನು ಸೇವಿಸಲು ನಿರಾಕರಿಸಿದ್ದರು.
ಉದ್ಯೋಗಕ್ಕೆ ಮೇಲ್ಜಾತಿಯ ಮಹಿಳೆಯರನ್ನು ಕೂಡ ಸಂದರ್ಶನ ಮಾಡಿ ಕೆಳಜಾತಿಯ ಮಹಿಳೆಯನ್ನು ‘ಭೋಜನ ಮಾತೆ’ಯಾಗಿ ನೇಮಕ ಮಾಡಿರುವುದಕ್ಕೆ ವಿದ್ಯಾರ್ಥಿಗಳ ಹೆತ್ತವರು ಕೂಡ ಆಕ್ಷೇಪ ಎತ್ತಿದ್ದರು. ಆದರೆ, ದಲಿತ ಮಹಿಳೆಯ ನಿಯೋಜನೆಯಲ್ಲಿ ನಿಯಮಗಳನ್ನು ಅನುಸರಿಸಿಲ್ಲ. ಆದುದರಿಂದ ಅವರ ನಿಯೋಜನೆ ರದ್ದುಗೊಳಿಸಲಾಗಿದೆ ಎಂದು ಚಂಪಾವತ್ನ ಮುಖ್ಯ ಶಿಕ್ಷಣಾಧಿಕಾರಿ ಆರ್.ಸಿ. ಪುರೋಹಿತ್ ಹೇಳಿದ್ದಾರೆ.