ಚುನಾವಣೆ ಮುಂದೂಡಿ, ರ್ಯಾಲಿ ನಿಷೇಧಿಸಿ: ಅಲಹಾಬಾದ್ ಹೈಕೋರ್ಟ್ ಸಲಹೆ
ಅಲಹಾಬಾದ್: ಒಮೈಕ್ರಾನ್ ಭೀತಿ ಹಿನ್ನೆಲೆಯಲ್ಲಿ ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಒಂದು ಅಥವಾ ಎರಡು ತಿಂಗಳು ಮುಂದೂಡುವಂತೆ ಮತ್ತು ತಕ್ಷಣದಿಂದಲೇ ಎಲ್ಲ ಚುನಾವಣಾ ರ್ಯಾಲಿಗಳನ್ನು ನಿಷೇಧಿಸುವಂತೆ ಅಲಹಾಬಾದ್ ಹೈಕೋರ್ಟ್ ಭಾರತದ ಚುನಾವಣಾ ಆಯೋಗ ಮತ್ತು ಪ್ರಧಾನಿಗೆ ಸಲಹೆ ಮಾಡಿದೆ.
ಚುನಾವಣೆ ಜತೆಗೆ ಸಂಬಂಧ ಇಲ್ಲದ ಜಾಮೀನು ಅರ್ಜಿಯೊಂದರ ವಿಚಾರಣೆ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
"ರ್ಯಾಲಿಗಳನ್ನು ತಡೆಯದಿದ್ದರೆ, ಪರಿಣಾಮ ಎರಡನೇ ಅಲೆಗಿಂತ ಭೀಕರವಾಗಲಿದೆ" ಎಂದು ನ್ಯಾಯಮೂರ್ತಿ ಶೇಖರ್ ಯಾದವ್ ಹೇಳಿದ್ದಾರೆ. "ಜಾನ್ ಹೈ ತೋ ಜಹಾನ್ ಹೇ (ಜೀವ ಇದ್ದರೆ ಮಾತ್ರ ಜಗತ್ತು) ಎಂದು ಅವರು ಮಾರ್ಮಿಕವಾಗಿ ನುಡಿದರು.
ನೂರಾರು ಪ್ರಕರಣಗಳು ವಿಚಾರಣೆಗೆ ಬರುವ ಹಿನ್ನೆಲೆಯಲ್ಲಿ ದಿನನಿತ್ಯ ಕೋರ್ಟ್ ಕ್ಯಾಂಪಸ್ ಜನದಟ್ಟಣೆಯಿಂದ ಕೂಡಿರುತ್ತದೆ. ಸೇರಿದ ಜನ ಸುರಕ್ಷಿತ ಅಂತರವನ್ನೂ ಕಾಪಾಡುತ್ತಿಲ್ಲ. ಒಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೂರನೇ ಅಲೆಯ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಿದರು. ಜತೆಗೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಾಗೂ ಹಲವು ದೇಶಗಳು ಲಾಕ್ ಡೌನ್ ಜಾರಿಗೊಳಿಸಿರುವ ಕುರಿತ ಪತ್ರಿಕಾ ವರದಿಗಳನ್ನೂ ಅವರು ಉಲ್ಲೇಖಿಸಿದರು.
"ಗ್ರಾಮ ಪಂಚಾಯತ್ ಚುನಾವಣೆಗಳು ಮತ್ತು ಬಂಗಾಳ ವಿಧಾನಸಭಾ ಚುನಾವಣೆ ಹಲವು ಮಂದಿಗೆ ಸೋಂಕು ಹರಡಿದೆ. ಇದು ಹಲವು ಸಾವಿಗೂ ಕಾರಣವಾಗಿದೆ" ಎಂದು ಹೇಳಿದರು.
ರಾಜಕೀಯ ಪಕ್ಷಗಳು ರ್ಯಾಲಿಗಳನ್ನು ಮತ್ತು ಸಭೆ ಸಮಾರಂಭಗಳನ್ನು ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸುತ್ತಿವೆ. ಇಂಥ ಕಡೆ ಕೋವಿಡ್ ಶಿಷ್ಟಾಚಾರ ಪಾಲಿಸುವುದು ಕಷ್ಟ ಸಾಧ್ಯ ಎಂದು ವಿವರಿಸಿದರು.