ಕೇರಳ ರಾಜಕೀಯ ಹತ್ಯೆಗಳ ಕುರಿತು ದ್ವೇಷಕಾರಿ ಪೋಸ್ಟ್ ಮಾಡುವವರ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದ ಡಿಜಿಪಿ
Photo : ANI
ತಿರುವನಂತಪುರಂ: ಇತ್ತೀಚೆಗೆ ಕೇರಳದಲ್ಲಿ ನಡೆದ ಎರಡು ರಾಜಕೀಯ ಕಾರ್ಯಕರ್ತರ ಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ಕೇರಳ ಡಿಜಿಪಿ ಅನಿಲ್ ಕಾಂತ್ ಇಂದು ಎಲ್ಲಾ ಜಿಲ್ಲಾ ಪೊಲೀಸ್ ಮುಖ್ಯಸ್ಥರುಗಳಿಗೆ ಆದೇಶ ಹೊರಡಿಸಿ, ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿಗಳು ಹಾಗೂ ಸಂದೇಶಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.
ಇತ್ತೀಚೆಗೆ ನಡೆದ ಬಿಜೆಪಿ ಪದಾಧಿಕಾರಿ ರಂಜಿತ್ ಶ್ರೀನಿವಾಸ್ ಹಾಗೂ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಕೆ ಎಸ್ ಶಾನ್ ಅವರ ಹತ್ಯೆಗಳ ಹಿನ್ನೆಲೆಯಲ್ಲಿ ಮತೀಯ ದ್ವೇಷ ಹುಟ್ಟಿಸುವ ಹಲವಾರು ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹರಡುತ್ತಿರುವುದರಿಂದ ಈ ಆದೇಶ ಹೊರಡಿಸಲಾಗಿದೆ.
ದ್ವೇಷ ಹರಡುವ ವಿಚಾರಗಳನ್ನು ಚರ್ಚಿಸಲು ಅನುಮತಿಸುವ ಸಾಮಾಜಿಕ ಜಾಲತಾಣ ಗ್ರೂಪ್ಗಳ ಅಡ್ಮಿನ್ಗಳ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು. ಇಂತಹ ವಿಚಾರಗಳ ಮೇಲೆ ನಿಗಾ ಇಡುವಂತೆ ಸೈಬರ್ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.
ಈಗಾಗಲೇ ಪ್ರಚೋದನಕಾರಿ ಪೋಸ್ಟ್ ಗಳ ಮೂಲಕ ಕೋಮು ದ್ವೇಷ ಹರಡಲು ಯತ್ನಿಸಿದ ಸುಮಾರು 30 ಪ್ರಕರಣಗಳನ್ನು ಪೊಲೀಸರು ದಾಖಲಿಸಲಾಗಿದ್ದು ಕೊಲ್ಲಂ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿಯನ್ನೂ ಬಂಧಿಸಲಾಗಿದೆ.